ಸ್ವಚ್ಛತೆಗೆ ಎಲ್ಲರ ಸಹಕಾರ ಅಗತ್ಯ
Team Udayavani, Aug 4, 2018, 12:29 PM IST
ಹುಣಸೂರು: ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2018ರ ಪ್ರಯುಕ್ತ ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ಗಿರಿಜನ ಹಾಡಿಗಳಲ್ಲಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕರ್ಣಕುಪ್ಪೆ ಎಸ್ಎನ್ಜಿ ಪ್ರೌಢಶಾಲೆ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಆಶಾ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಹಾಗೂ ಗಿರಿಜನ ಹಾಡಿಗಳಲ್ಲಿ ಗ್ರಾಮ ಸ್ವಚ್ಛತೆ, ಶೌಚಾಲಯ ಬಳಕೆ, ಮನೆ ಮುಂದಿರುವ ಚರಂಡಿಯಲ್ಲಿನ ಸ್ವಚ್ಛತೆ ನಿರ್ವಹಣೆ, ಹಾಗೂ ಸರ್ಕಾರಿ ಕಚೇರಿಗಳ ಸ್ವಚ್ಛತೆ ಬಗ್ಗೆ ಮಾಹಿತಿ ನೀಡುತ್ತಿದ್ದು, ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕ ಹನುಮಂತು ಮಾತನಾಡಿ, ಆರೋಗ್ಯ ರಕ್ಷಣೆಗೆ ಸ್ವಚ್ಛತೆಯೇ ಮುಖ್ಯವಾದುದು. ನಮ್ಮ ಮನೆ, ಬೀದಿ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು, ಶಾಲೆಗಳಲ್ಲಿ ಉತ್ತಮ ಪರಿಸರ ಕಾಪಾಡಬೇಕು. ಆರೋಗ್ಯ ಇಲಾಖೆ ನೀಡುವ ಮಾಹಿತಿಯನ್ನು ಅನುಸರಿಸಿದಲ್ಲಿ ಎಲ್ಲಾ ರೋಗಗಳನ್ನು ನಿಯಂತ್ರಿಸಬಹುದೆಂದರು.
ಕಾರ್ಯಕ್ರಮದಲ್ಲಿ ಎಸ್ಎನ್ಜಿ ಶಾಲೆಯ ಮುಖ್ಯ ಶಿಕ್ಷಕ ಪಾಲ್ಗುಣ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.