ಮಹಿಳೆಯರ ಮೇಲಿನ ದೌರ್ಜನ್ಯ; ಸರ್ಕಾರದ ಮೌನ ಆತಂಕಕಾರಿ: ಪುಷ್ಪ ಅಮರನಾಥ್
Team Udayavani, Nov 12, 2020, 3:44 PM IST
ಹುಣಸೂರು: ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದ್ದು, ಆದರೆ ಸರ್ಕಾರ ಈ ಬಗ್ಗೆ ಚಕಾರವೆತ್ತದಿರುವುದು ಆತಂಕಕಾರಿ ಬೆಳವಣಿಗೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಆತಂಕ ವ್ಯಕ್ತಪಡಿಸಿದರು.
ಹುಣಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕ ಸಿದ್ದು ಸವದಿ ಬಿಜಾಪುರ ಜಿಲ್ಲೆಯ ತೇರದಾಳದಲ್ಲಿ ಚುನಾವಣೆ ವೇಳೆ ಮಹಿಳೆಯೊಬ್ಬರನ್ನು ಎಳೆದಾಡಿದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡುವ ಜೊತೆಗೆ ಬಂಧಿಸಬೇಕೆಂದು ಆಗ್ರಹಿಸಿದರು.
ಇನ್ನು ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಸುಗ್ರೀವಾಜ್ಣೆ ಮೂಲಕ ಜಾರಿಗೊಳಿಸುವ ಬದಲು ಸಾರ್ವತ್ರಿಕವಾಗಿ ಚರ್ಚೆ ನಡೆಸಬೇಕಿತ್ತು. ಒಂದು ಜಿಲ್ಲೆಯಲ್ಲಿ ಪೈಲಟ್ ಪ್ರಾಜೆಕ್ಟ್ ಮಾಡಿ ಸಾಧಕ ಬಾಧಕದ ನಂತರ ಸದನದಲ್ಲಿ ಮಂಡಿಸಿದ್ದರೆ ಬಿಜೆಪಿಯವರ ಕಾರ್ಯವನ್ನು ಶ್ಲಾಘಿಸುತ್ತಿದ್ದೆ. ಆದರೆ ಯಾವುದೇ ಚರ್ಚೆ ನಡೆಸದೆ ಸುಗ್ರೀವಾಜ್ಣೆ ಮೂಲಕ ಜಾರಿಗೊಳಿಸಿ, ಹಿಟ್ಲರ್ ನಂತೆ ಸರ್ವಾಧಿಕಾರಿ ಸರಕಾರ ನಡೆಸುತ್ತಿದ್ದಾರೆಂದು ಅವರು ಜರಿದರು.