ಕೋವಿಡ್ 19 ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣ
Team Udayavani, Apr 26, 2020, 1:06 PM IST
ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಹೇಳಿದರು. ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ಗ್ರಾಮಾಂತರ ವಿಭಾಗದಿಂದ ಸೋಂಕು ತಡೆಗೆ ನೂತನವಾಗಿ ರೂಪಿಸಿರುವ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಸಂಚಾರಕ್ಕೆ ಡೀಸಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿ, ಶುಕ್ರವಾರ ತಡರಾತ್ರಿ ಒಬ್ಬ ಸೋಂಕಿತ ಗುಣಮುಖನಾಗಿದ್ದು, ಇನ್ನೂ ಕೆಲವರು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ನಂಜನಗೂಡಿನ ಜ್ಯುಬಿಲಿಯಂಟ್ ಹಾಗೂ ಹೆಬ್ಯಾ ಗ್ರಾಮದ ಸೋಂಕಿತರ ಜೊತೆ ಪ್ರಥಮ ಸಂಪರ್ಕ ಹೊಂದಿದ್ದವರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಒಟ್ಟಾರೆ ಪರಿಸ್ಥಿತಿ ಅವಲೋಕಿಸಿದರೆ ಸದ್ಯ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣದಲ್ಲಿದೆ ಎಂದರು.
ಕೆಎಸ್ಆರ್ಟಿಸಿಯಿಂದ ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಆರಂಭಿಸಿದ್ದು, ಮೈಸೂರು ಗ್ರಾಮಾಂತರ, ನಗರ ವಿಭಾಗದ ಅಧಿಕಾರಿಗಳು ಕಡಿಮೆ ಅವಧಿಯಲ್ಲಿ ಫೀವರ್ ಕ್ಲಿನಿಕ್ ಬಸ್ ನಿರ್ಮಿಸಿದ್ದಾರೆ. ನಮ್ಮ ವೈದ್ಯರ ತಂಡ ಬಸ್ ಪರಿಶೀಲಿಸಿ ಚಿಕಿತ್ಸೆ ನೀಡಲು ಯೋಗ್ಯವಾಗಿದೆ ಎಂದು ಒಪ್ಪಿಗೆ ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶ ಮತ್ತು ಸೋಂಕು ಕಂಡುಬಂದ ಗ್ರಾಮಗಳಲ್ಲಿ ಬಸ್ ಸಂಚರಿಸಿ ತಪಾಸಣೆ ನಡೆಸಲಿದೆ. ಒಬ್ಬರು ವೈದ್ಯರು, ವೈದ್ಯಕೀಯ ಸಿಬ್ಬಂದಿ ಜ್ವರ, ನೆಗಡಿ, ಕೆಮ್ಮು, ಮಧುಮೇಹಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಾರೆ ಎಂದರು.
ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಡಿಎಚ್ಒ ಡಾ.ವೆಂಕಟೇಶ್, ಕೆಎಸ್ ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಅಧಿಕಾರಿ ಆರ್.ಅಶೋಕ್ ಕುಮಾರ್, ಎಸ್. ಪಿ.ನಾಗರಾಜು ಇದ್ದರು.
ಸಂಚಾರಿ ಕ್ಲಿನಿಕ್ ಬಸ್ನಲ್ಲಿ ಏನೇನಿದೆ? : ಸಂಚಾರಿ ಫೀವರ್ ಕ್ಲಿನಿಕ್ನಲ್ಲಿ ಅರಿವು ಮೂಡಿಸುವ ವಿವಿಧ ಪೋಸ್ಟರ್, ರೋಗದ ಲಕ್ಷಣ, ಹರಡುವ ಬಗ್ಗೆ ಮಾಹಿತಿ ಇದೆ. ಬಾಗಿಲ ಬಳಿ ಸ್ಯಾನಿಟೈಸರ್ ಇದ್ದು, ಮುನ್ನ ಕೈ ತೊಳೆದು ಬಸ್ ಹತ್ತಬೇಕು. ರೋಗಿಗಳಿಗೆ ಆಸನದ ವ್ಯವಸ್ಥೆ ಇದೆ. ಸಿಬ್ಬಂದಿಗಾಗಿ ಕುರ್ಚಿ ಟೇಬಲ್ ಅಳವಡಿಸಿದ್ದು, ಚುಚ್ಚುಮದ್ದು, ಚಿಕಿತ್ಸೆ ನೀಡಲು ಬೆಡ್ ಸೇರಿದಂತೆ ಹಲವು ವ್ಯವಸ್ಥೆ ಇದೆ.