ಮದುವೆ ಮುಂದೂಡಿದ ಪೊಲೀಸ್ ಜೋಡಿ
Team Udayavani, May 12, 2021, 2:41 PM IST
ಹುಣಸೂರು:ಇದೇ ತಿಂಗಳು 23ರಂದು ಹಸೆಮಣೆ ಏರಬೇಕಿದ್ದ ಪೊಲೀಸ್ ಜೋಡಿ ಕೋವಿಡ್ ಸೇವೆಗಾಗಿ ವಿವಾಹ ಮುಂದೂಡಿ ಇಬ್ಬರೂ ಕರ್ತವ್ಯಕ್ಕೆ ಹಾಜರಾಗುವ ಮೂಲಕ ನಿಷ್ಠೆ ಮೆರೆದಿದ್ದಾರೆ.
ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಕಳೆದ 5 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಅನಂತ ತೀರ್ಥ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ಸೌಭಾಗ್ಯ ಅವರ ವಿವಾಹ ಮೇ23ರಂದು ನಿಗದಿಯಾಗಿತ್ತು. ಇದಕ್ಕಾಗಿ ರಜೆಪಡೆದು ಮದುವೆ ಸಿದ್ಧತೆಯಲ್ಲಿ ತೊಡಗಿದ್ದರು.
ಈನಡುವೆ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಹಾಗೂ ಲಾಕ್ಡೌನ್ ಘೋಷಿಸಿದ್ದರಿಂದ ಎರಡೂ ಕುಟುಂಬಗಳು ಚರ್ಚಿಸಿ ಕೊನೆಗೆ ಮದುವೆ ಸರಳವಾಗಿ ನಡೆಸಲು ತೀರ್ಮಾನಿಸಿದ್ದರು. ಈ ಯುವ ಜೋಡಿ ಮದುವೆಯಾದರೂಸ್ನೇಹಿತರು ಹಾಗು ಸಂಬಂಧಿಕರನ್ನು ಕರೆಯುವಂತಿಲ್ಲ,ಜೊತೆಗೆ ರಜೆ ಸಿಕ್ಕರೂ ಎಲ್ಲೂ ಓಡಾಡುವಂತೆಯೂ ಇಲ್ಲ. ಇಬ್ಬರ ರಜೆಯಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಮನಗಂಡು ಮದುವೆಯನ್ನೇ ಮುಂದೂಡಿ,ಇಬ್ಬರೂ ಕರ್ತವ್ಯ ಮುಂದುವರಿಸಿದ್ದಾರೆ.
ಕೊರೊನಾ ವೇಳೆ ಇಬ್ಬರೂ ರಜೆ ಪಡೆದರೆ ಇತರೆ ಸಹೋದ್ಯೋಗಿಗಳ ಮೇಲೆ ಒತ್ತಡ ಹೆಚ್ಚಲಿದೆ.ಮದುವೆ ಸಂಭ್ರಮಕ್ಕೂ ನಿಯಮ ಅಡ್ಡಿಯಾಗಲಿದೆ. ಹೀಗಾಗಿ ಇಬ್ಬರೂ ಚರ್ಚಿಸಿ ಮದುವೆಯನ್ನುಮುಂದೂಡಿದ್ದು, ಮುಂದಿನ ನವರಾತ್ರಿ ಅಥವಾ ಕಾರ್ತೀಕ ಮಾಸದಲ್ಲಿ ಹಸೆ ಮಣೆ ಏರಲುತೀರ್ಮಾನಿಸಿದ್ದೇವೆ ಎಂದು ಪೇದೆ ಅನಂತ ತೀರ್ಥ ತಿಳಿಸಿದ್ದಾರೆ. ವಧು ಸೌಭಾಗ್ಯ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ನಿವಾಸಿಯಾಗಿದ್ದು, ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿದ್ದಾರೆ.