ಅರಮನೆಗೆ ಆಗಮಿಸಿದ ದಸರಾ ಗಜಪಡೆ
Team Udayavani, Aug 18, 2017, 11:51 AM IST
ಮೈಸೂರು: ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ದಸರಾ ಗಜಪಡೆಯ ಎಂಟು ಆನೆಗಳನ್ನು ಗುರುವಾರ ವಿಶೇಷ ಪೂಜೆಗಳೊಂದಿಗೆ ಅರಮನೆಗೆ ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನ 12.05ಕ್ಕೆ ಅರಮನೆಯ ಜಯಮಾರ್ತಾಂಡ ಮಹಾ ದ್ವಾರದ ಮೂಲಕ ಆನೆಗಳು ಅರಮನೆ ಪ್ರವೇಶಿಸಿದವು.
ಆ.12ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ನಡೆದ ಗಜಪಯಣ ಕಾರ್ಯಕ್ರಮದ ಮೂಲಕ ಕರೆತರಲಾದ ಮೊದಲ ತಂಡದ ಎಂಟು ಆನೆಗಳು ಇಲವಾಲದ ಅಲೋಕದಲ್ಲಿ ಬೀಡುಬಿಟ್ಟಿದ್ದವು. ಗುರುವಾರ ಬೆಳಗ್ಗೆ ಆನೆಗಳ ಮೈತೊಳೆದ ನಂತರ ಲಾರಿಗಳಲ್ಲಿ ಅಶೋಕಪುರಂನ ಅರಣ್ಯಭವನಕ್ಕೆ ಕರೆತಂದು ಅರಣ್ಯಾಧಿಕಾರಿಗಳು ಪೂಜೆ ಸಲ್ಲಿಸಿದ ನಂತರ ಕಾಲ್ನಡಿಗೆಯಲ್ಲಿ ಅರಮನೆಗೆ ಕರೆತರಲಾಯಿತು.
ಸಾಂಪ್ರದಾಯಿಕ ಸ್ವಾಗತ: ಅರಮನೆಯ ಜಯಮಾರ್ತಂಡ ದ್ವಾರದ ಬಳಿ ಆನೆಗಳಿಗೆ ಪಾದಗಳನ್ನು ತೊಳೆದು, ಪಾದಕ್ಕೆ ಅರಿಶಿನ-ಕುಂಕುಮ, ಗಂಧ, ಬಸ್ಮ, ವಿಭೂತಿ ಹಚ್ಚಿ, ಅಕ್ಷತೆ ಇಟ್ಟು, ಗರಿಕೆ ಹಾಗೂ ವಿವಿಧ ಬಗೆಯ ಹೂಗಳಿಂದ ಪೂಜೆ ಸಲ್ಲಿಸಿ, ಧೂಪ-ದೀಪಗಳಿಂದ ಆರತಿ ಮಾಡಲಾಯಿತು. ಆನೆಗಳಿಗೆ ಪಂಚಫಲಗಳು ಹಾಗೂ ಗಣಪತಿಗೆ ಇಷ್ಟವಾದ ಎಳ್ಳು ಮತ್ತು ಜೇನುತುಪ್ಪದ ಎಳ್ಳುಂಡೆಗಳು, ಚಕ್ಕುಲಿ, ಕೋಡುಬಳೆ, ಕಡುಬು, ಮೋದಕ ಹಾಗೂ ಕಬ್ಬು, ಬೆಲ್ಲವನ್ನು ನೈವೇದ್ಯವಾಗಿ ಅರ್ಪಿಸಲಾಯಿತು.
ಗಜಪಡೆಗೆ ಪೂಜೆ: ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಆಗಮಿಕ ಡಾ.ಶಶಿಶೇಖರ ದೀಕ್ಷಿತ್ ಹಾಗೂ ಪ್ರಹಾದ್ ರಾವ್ ವೇದಘೋಷ, ಮಂತ್ರಪುಷ್ಪಗಳಿಂದ ಗಜಪಡೆಗೆ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಸಮ್ಮುಖದಲ್ಲಿ ಜಿಲ್ಲಾಡಳಿತದ ಪ್ರಮುಖರು ಪುಷ್ಪಾರ್ಚನೆ ಮಾಡಿ ಆನೆಗಳನ್ನು ಅರಮನೆಗೆ ಬರಮಾಡಿಕೊಂಡರು.
ಗೌರವ ರಕ್ಷೆ: ನಾಡಹಬ್ಬ ದಸರೆಗೆ ಆಗಮಿಸಿದ ಆನೆಗಳಿಗೆ ಪೊಲೀಸ್ ಇಲಾಖೆವತಿಯಿಂದ ಗೌರವ ರಕ್ಷೆ ನೀಡಲಾಯಿತು. ನಂತರ ಮಂಗಳವಾದ್ಯ, ಜಾನಪದ ಕಲಾತಂಡಗಳು, ಪೂರ್ಣಕುಂಬಗಳ ಜೊತೆ ಸ್ವಾಗತದೊಂದಿಗೆ ಪೊಲೀಸ್ ಇಲಾಖೆಯ ಇಂಗ್ಲಿಷ್ ಬ್ಯಾಂಡ್ನ ಜೊತೆ ವೇದ ಘೋಷಗಳೊಂದಿಗೆ ಅರಮನೆ ಮುಂಭಾಗದ ಆನೆ ಬಾಗಿಲಿಗೆ ಕರೆದುಕೊಂಡು ಹೋಗಿ ಪೂರ್ವದಿಕ್ಕಿಗೆ ಆನೆಗಳನ್ನು ಸಾಲಾಗಿ ನಿಲ್ಲಿಸಿ, ವೇದಘೋಷಗಳೊಂದಿಗೆ ಪೂಜೆ, ಪುಷ್ಪಾ$ರ್ಚನೆಯೊಂದಿಗೆ ಪೊಲೀಸ್ ಇಲಾಖೆವತಿಯಿಂದ ಪೊಲೀಸ್ ಗೌರವ ರಕ್ಷೆ ನೀಡಲಾಯಿತು.
ತಾಂಬೂಲ ನೀಡಿಕೆ: ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ಗಣ್ಯರಿಗೆ ಎಲೆ-ಅಡಿಕೆ-ತಾಂಬೂಲ-ಅಕ್ಷತೆ ನೀಡಿ ನಾಡಹಬ್ಬಕ್ಕೆ ಸಹಕಾರ ಕೋರಿದರು. ನಂತರ ದಸರಾ ಆನೆಗಳ ಮಾವುತರು-ಕಾವಾಡಿಗಳ ಕುಟುಂಬದವರಿಗೆ ಅಗತ್ಯ ಪರಿಕರಗಳನ್ನು ವಿತರಿಸಿದ ನಂತರ ಚಾಮುಂಡೇಶ್ವರಿಗೆ ಆರತಿ ಬೆಳಗಲಾಯಿತು.
ಶಾಸಕ ಎಂ.ಕೆ.ಸೋಮಶೇಖರ್, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಮೇಯರ್ ಎಂ.ಜೆ.ರವಿಕುಮಾರ್, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ದಸರಾ ವಿಶೇಷಾಧಿಕಾರಿಗಳಾದ ಜಿಲ್ಲಾಧಿಕಾರಿ ರಂದೀಪ್ ಡಿ., ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪಿ.ಬಿ.ಕರುಣಾಕರ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಇತರರು ಇದ್ದರು.
ಸಾರ್ವಜನಿಕರು, ಕಾರ್ಯಕರ್ತರು, ಸಮಾಜಸೇವಕರು, ಅಧಿಕಾರಿಗಳು ಎಲ್ಲರೂ ಸೇರಿ ಮೈಸೂರು ದಸರಾವನ್ನು ಜನರ ದಸರಾವನ್ನಾಗಿ ಆಚರಣೆ ಮಾಡೋಣ. ಈ ಬಾರಿಯ ದಸರಾ ಉದ್ಘಾಟಕರನ್ನಾಗಿ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ರನ್ನು ಆಯ್ಕೆ ಮಾಡಲಾಗಿದ್ದು, ಸೆಪ್ಟೆಂಬರ್ 2ನೇ ವಾರದಲ್ಲಿ ದಸರಾ ಮಹೋತ್ಸವ ಆಚರಣಾ ಸಮಿತಿ ಅವರಿಗೆ ಆಹ್ವಾನ ನೀಡಲಿದೆ.
-ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್