ದಸರೆಗೆ ಸಿಎಂ ಬಿಎಸ್ವೈ, ಪಿ.ವಿ.ಸಿಂಧುಗೆ ಆಹ್ವಾನ
Team Udayavani, Sep 15, 2019, 3:00 AM IST
ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೈಸೂರು ದಸರಾ ಸ್ವಾಗತ ಸಮಿತಿವತಿಯಿಂದ ನಾಡಹಬ್ಬ ದಸರಾಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಜಿಲ್ಲೆಯ ಜನಪತ್ರಿನಿಧಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ವಿ.ಸೋಮಣ್ಣ, ದಸರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮೈಸೂರಿನ ಎಲ್ಲಾ ಪಕ್ಷಗಳ ಶಾಸಕರೂ, ಜಿಲ್ಲಾಧಿಕಾರಿಗಳೂ ಆಹ್ವಾನಿಸಿದ್ದೇವೆ. ಸೆ.29ರ ಬೆಳಗ್ಗೆ 9 ಗಂಟೆ ನಂತರ ಚಾಮುಂಡೇಶ್ವರಿ ಪೂಜೆ ಬಳಿಕ ದಸರಾ ಉದ್ಘಾಟನೆ ಇದೆ. ಅ.8ರವರೆಗೂ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿಯ ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ಯೋಜಿಸಿದ್ದೇವೆ ಎಂದು ತಿಳಿಸಿದರು.
ಪಿ.ವಿ.ಸಿಂಧುಗೆ ಆಹ್ವಾನ: ದಸರಾ ಮಹೋತ್ಸವ ಅಂಗವಾಗಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮ ಉದ್ಘಾಟಿಸಲು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರನ್ನು ಹೈದರಾಬಾದ್ನಲ್ಲಿರುವ ಅವರ ನಿವಾಸದಲ್ಲಿ ಆಹ್ವಾನಿಸಲಾಯಿತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಶಂತ್ ಅವರು, ಸಿಂಧು ಅವರಿಗೆ ಫಲ-ತಾಂಬೂಲ ನೀಡಿ ಆಹ್ವಾನಿಸಿದರು.