ಲಾಕ್ ಡೌನ್ ಮುಂದುವರಿಕೆ ಬಗ್ಗೆ ಮೇ.23ರಂದು ಸಿಎಂ ನಿರ್ಧಾರ: ಡಿಸಿಎಂ ಅಶ್ವಥ್ ನಾರಾಯಣ್
Team Udayavani, May 20, 2021, 5:50 PM IST
ಮೈಸೂರು: ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸಿಎಂ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಮೇ. 23 ರಂದು ತೀರ್ಮಾನ ತಿಳಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಂಕಿ ಅಂಶಗಳನ್ನು ಗಮನಿಸಿ ಮತ್ತಷ್ಟು ಬಿಗಿಕ್ರಮ ವಹಿಸಬೇಕೋ, ಇಲ್ಲ ಸಡಿಲಗೊಳಿಸಬೇಕೋ ಎನ್ನುವ ತೀರ್ಮಾನವಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಗಣ್ಯಮಾನ್ಯರು, ವಿರೋಧ ಪಕ್ಷದವರ ಸಲಹೆ ಪರಿಗಣಿಸುತ್ತೇವೆ ಎಂದರು.
ಬ್ಲಾಕ್ ಫಂಗಸ್ ನಿಂದ ಯಾರು ಸತ್ತಿಲ್ಲ: ರಾಜ್ಯದಲ್ಲಿ ಬ್ಲಾಕ್ ಫಂಗಸ್ ನಿಂದ ಯಾರು ಸತ್ತಿಲ್ಲ ಎಂದು ಡಿಸಿಎಂ ಅಚ್ಚರಿ ಹೇಳಿಕೆ ನೀಡಿದರು. ಮಂಡ್ಯದಲ್ಲಿ ಮೂರು ಪ್ರಕರಣಗಳು ಕಂಡುಬಂದಿತ್ತು ಎಂದು ಹೇಳಲಾಗಿತ್ತು, ಆದರೆ ಈ ಮೂರರ ಪೈಕಿ ಎರಡು ಬ್ಲಾಕ್ ಪಂಗಸ್ ಪ್ರಕರಣ ಅಲ್ಲ. ಮೈಸೂರಿನ ಸಾವು ಪ್ರಕರಣದ ಬಗ್ಗೆಯೂ ಮಾಹಿತಿ ಇಲ್ಲ ಎಂದರು.
ಬ್ಲಾಕ್ ಫಂಗಸ್ ಗೆ ಔಷಧಿ ಕೊರತೆ ಇದೆ. ಸದ್ಯ ಕೇಂದ್ರ ಸರ್ಕಾರದ ಜೊತೆ ಸಮನ್ವಯ ನಡೆಸಿ ಚಿಕಿತ್ಸೆ ನೀಡುತ್ತಿದ್ದೇವೆ. ಇದಕ್ಕೆ ಔಷಧಿ ಪೂರೈಕೆಯಾಗುತ್ತದೆ. ಹೊರ ದೇಶದ ಜೊತೆ ಔಷಧಿ ಆಮದು ಮಾಡಿಕೊಳ್ಳಲು ಪ್ರಯತ್ನ ನಡೆದಿದೆ. ಕೆಲವೇ ವಾರಗಳಲ್ಲಿ ಅಗತ್ಯವಿರುವ ಔಷಧಿ ಪೂರೈಕೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಯಾರು ಮುಚ್ಚಿಡದೆ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದರು.
ಕರ್ನಾಟಕದಲ್ಲೇ ಸ್ಪುಟ್ನಿಕ್ ಲಸಿಕೆ ಉತ್ಪಾದನೆ ವಿಚಾರವಾಗಿ ಮಾತನಾಡಿದ ಅವರು, ಉತ್ಪಾದನೆಯಾದ ಶೇ.50ರಷ್ಟು ಸುಟ್ನಿಕ್ ಔಷಧವನ್ನು ಸರ್ಕಾರಕ್ಕೆ ನೀಡಬೇಕು. ಬಾಕಿ ಶೇ.50ರಷ್ಟು ಔಷಧಿಯನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುವುದು. ಭಾರತ್ ಬಯೋಟೆಕ್ ಸಂಸ್ಥೆ ಸೇರಿದಂತೆ ಬೇರೆ ಕಂಪನಿಗಳಿಗೆ ವಿಧಿಸಿದ್ದ ನಿಮಯಗಳೇ ಸುಟ್ನಿಕ್ಗೂ ಅನ್ವಯ ಆಗಲಿದೆ ಎಂದರು.
ನಾಯಕತ್ವ ಬದಲಾವಣೆಯಿಲ್ಲ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಎಲ್ಲ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರುಸುತ್ತಿದೆ. ಪಕ್ಷದಲ್ಲಿ ಅಥವಾ ಬೇರೆಲ್ಲೂ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ ಎಂದು ಡಾ. ಸಿ.ಎನ್ ಅಶ್ವಥ್ ನಾರಾಯಣ್ ಸ್ಪಷ್ಟನೆ ನೀಡಿದರು.