ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ
Team Udayavani, May 31, 2020, 2:10 PM IST
ಮೈಸೂರು: ನಮ್ಮ ಸರಕಾರ ಸುಭದ್ರವಾಗಿದೆ. ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ. ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ. ಸರ್ಕಾರ ಮೂರೂವರೆ ವರ್ಷ ಸ್ಥಿರವಾಗಿರುತ್ತದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಆಂತರಿಕ ಕಚ್ಚಾಟದಿಂದ ಸರ್ಕಾರ ಬೀಳುತ್ತದೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿದರು. ಆಂತರಿಕ ಕಚ್ಚಾಟ ಏನು ಅಂತ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಆಂತರಿಕ ಕಚ್ಚಾಟದಿಂದ ಯಾವ ಸರ್ಕಾರಕ್ಕೆ ತೊಂದರೆಯಾಗಿದೆ ಎನ್ನುವುದೂ ಗೊತ್ತಿದೆ ಎಂದರು.
ಬಿಜೆಪಿ ಶಾಸಕರ ಪ್ರತ್ಯೇಕ ಸಭೆ ವಿಚಾರವಾಗಿ ಮಾತನಾಡಿದ ಅವರು, ಶಾಸಕರು ಸಭೆ ಮಾಡಿದ್ದು ತಪ್ಪು. ಕೆಲವರಿಗೆ ಸಣ್ಣ ಪುಟ್ಟ ಅಪೇಕ್ಷೆಗಳು ಇರುತ್ತವೆ. ಅಪೇಕ್ಷೆ ಪಡುವುದು ತಪ್ಪಲ್ಲ. ಆದರೆ ಅದನ್ನು ಕೇಳುವ ರೀತಿ ಸರಿಯಾಗಿರಬೇಕು. ನೇರವಾಗಿ ಮುಖ್ಯಮಂತ್ರಿಯವರ ಜತೆ ಕುಳಿತು ಮಾತನಾಡಬೇಕು. ತಮ್ಮ ಸಮಸ್ಯೆಗಳಿದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.