ಸಾಲಬಾಧೆ: ರೈತ ಮಹಿಳೆ ಆತ್ಮಹತ್ಯೆ
Team Udayavani, Apr 27, 2018, 12:36 PM IST
ಪಿರಿಯಾಪಟ್ಟಣ: ಸಾಲಬಾಧೆ ತಾಳಲಾರದೆ ರೈತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಶೋದಮ್ಮ(55) ಮೃತ ರೈತ ಮಹಿಳೆ.
ಅವರ ಹೆಸರಿನಲ್ಲಿ 3 ಎಕರೆ ಜಮೀನಿದ್ದು, ತಂಬಾಕು, ಜೋಳ ಮತ್ತಿತರ ಬೆಳೆಗಳನ್ನು ಬೆಳೆದಿದ್ದರು. ಆದರೆ ಯಾವ ಬೆಳೆಯೂ ಕೈಗೆ ಸಿಗದೆ ಮನ ನೊಂದಿದ್ದರು. ಅಲ್ಲದೆ ಬೆಳೆ ಸಾಲವಾಗಿ ಕಂಪಲಾಪುರ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ 7 ಲಕ್ಷ ರೂ. ಸಾಲ ಮಾಡಿದ್ದರು.
ಅಲ್ಲದೆ, ಖಾಸಗಿ ಕಂಪನಿಯಲ್ಲಿ 2 ಲಕ್ಷ ರೂ.ಗಳಿಗೆ ಚಿನ್ನ ಅಡವಿಟ್ಟಿದ್ದರು. ಕಳೆದ 3 ದಿನಗಳ ಹಿಂದೆ ಚಿನ್ನಾಭರಣದ ಮೇಲಿನ ಸಾಲದ ನೋಟಿಸ್ ಬಂದಿದ್ದ ಕಾರಣ ಮನನೊಂದ ಈಕೆ, ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಕುಟುಂಬದವರು ಕೂಡಲೇ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.