ಸಾಲಬಾಧೆ: ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ
Team Udayavani, May 19, 2017, 12:19 PM IST
ಪಿರಿಯಾಪಟ್ಟಣ: ತಾಲೂಕಿನಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದ್ದು ಇಬ್ಬರು ರೈತರು ಸಾಲ ಬಾಧೆ ಹಾಗೂ ಬೆಳೆ ನಷ್ಟದಿಂದ ವಿಷ ಕುಡಿದು ಒಬ್ಬ ರೈತ ಹಾಗೂ ನೇಣು ಬಿಗಿದುಕೊಂಡು ಮತ್ತೂಬ್ಬ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. ತಾಲೂಕಿನ ಕೋಮಲಾಪುರ ಗ್ರಾಮದ ಸಣ್ಣೇಗೌಡ (61) ಮೃತ ದುರ್ದೈವಿ.
ಸಣ್ಣೇಗೌಡ ಮನೆಯ ಹತ್ತಿರ ವಿಷ ಕುಡಿದು ಒದ್ದಾಡುತ್ತಿದ್ದನ್ನು ನೋಡಿದ ಅಕ್ಕ-ಪಕ್ಕದವರು ಆತನನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತನಾಗಿದ್ದಾರೆ. ಈತನಿಗೆ 6 ಎಕರೆ ಜಮೀನಿದ್ದು, ಪಟ್ಟಣದ ಕಾಪೋರೇಶನ್ ಬ್ಯಾಂಕ್ನಲ್ಲಿ 13 ಲಕ್ಷ ರೂ ಸಾಲ ಇದ್ದು, ಕಳೆದ ಬಾರಿ ಜಮೀನಿನಲ್ಲಿ ಕೃಷಿ ಮಾಡಿದ್ದ ಶುಂಠಿ, ತಂಬಾಕು ಮತ್ತಿತರ ಬೆಳೆಗಳು ಸಕಾಲಕ್ಕೆ ಬಾರದೆ ಕೈಕೊಟ್ಟಿದ್ದರಿಂದ ಸಾಲದ ಒತ್ತಡದಿಂದ ಸಾಲ ತೀರಿಸಲಾಗದೆ ಸಾವಿಗೆ ಶರಣಾಗಿದ್ದಾನೆ. ಮೃತರಿಗೆ ಪತ್ನಿ ಗೌರಮ್ಮ, ಇಬ್ಬರು ಗಂಡು ಮಕ್ಕಳು ಇದ್ದಾರೆ.
ಮತ್ತೂಂದು ಪ್ರಕರಣ: ತಾಲೂಕಿನ ತೆಲಗಿನಕುಪ್ಪೆ ಗ್ರಾಮದ ಜನತಾ ಕಾಲೋನಿಯ ದೇವಯ್ಯ ಸಾಲ ಬಾಧೆ ಹಾಗೂ ಬೆಳೆ ನಷ್ಟದಿಂದ ಬೇಸರಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನಿಗೆ 2 ಎಕರೆ ಜಮೀನಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ 90 ಸಾವಿರ, ಕೈ ಸಾಲವಾಗಿ 2 ಲಕ್ಷ ರೂ ಇತ್ತು. ಕಳೆದ ಬಾರಿ ಸೂಕ್ತ ಸಮಯಕ್ಕೆ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ಮನೆಯ ಹತ್ತಿರ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.