ಸಾಲಬಾಧೆ: ಆತ್ಮಹತ್ಯೆಗೆ ಶರಣಾದ ಇಬ್ಬರು ರೈತರು
Team Udayavani, Dec 6, 2017, 1:04 PM IST
ಭೇರ್ಯ: ಸಾಲಬಾಧೆಯಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ. ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಮಗ ದಿನೇಶ್(26), ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಮಗ ಚನ್ನಕೇಶವ (26) ಮೃತ ರೈತರು.
ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಮಗ ದಿನೇಶ್ ತನ್ನ ಎರಡು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಗಾಗಿ ಸಾಲಿಗ್ರಾಮದ ಗ್ರಾಮೀಣ ಬ್ಯಾಂಕ್ನಲ್ಲಿ ತಂಬಾಕು ಬೆಳೆ ಹದಮಾಡಲು ಮತ್ತು ತಂಬಾಕು ಬ್ಯಾರಲ್ಗಾಗಿ 2ಲಕ್ಷ ಸಾಲ, ಕೈಸಾಲ 3 ಲಕ್ಷ ಮಾಡಿದ್ದ, ಕಳೆದ ವಾರದಿಂದ ತಂಬಾಕು ಬೆಲೆ ಕುಸಿದ ಹಿನ್ನಲೆಯಲ್ಲಿ ಮನನೊಂದು ತನ್ನ ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ,
ಅಸ್ವಸ್ಥನನ್ನು ಚಿಕ್ಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರದೊಯ್ಯಲಾಗಿ ಚಿಕ್ಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಮೃತನಿಗೆ ಪತ್ನಿ, ತಂದೆ, ತಾಯಿ ಇದ್ದಾರೆ. ಮತೊರ್ವ ರೈತ: ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಮಗ ಚನ್ನಕೇಶವ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳಗಾಗಿ ಕೊಳವೆ ಬಾವಿ ಕೊರಿಸಿದ್ದು, ನೀರು ಬರದ ಕಾರಣ ಮತ್ತೆರಡು ಕೊಳವೆ ಬಾವಿ ಕೊರಿಸಿದ್ದಾನೆ.
ಅಲ್ಲಿಯೂ ಸಹ ನೀರು ಬರಲಿಲ್ಲ, ಕೊಳವೆ ಬಾವಿ ಕೊರೆಸಲು ಕೈಸಾಲ ಮೂರು ಲಕ್ಷ ಮಾಡಿದ್ದ, ರೇಷ್ಮೆ ನಾಟಿಗಾಗಿ ಹೊಸಅಗ್ರಹಾರ ಸಹಕಾರ ಸಂಘದಲ್ಲಿ 50 ಸಾವಿರ ಸಾಲ ಮಾಡಿದ್ದು, ಕೊಳವೆಬಾವಿ ಸಾಲದಿಂದ ಮನನೊಂದು ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿದ್ದಾನೆ. ಅಸ್ವಸ್ಥಗೊಂಡು ಒದ್ದಾಡುತ್ತಿದ್ದ ರೈತನನ್ನು ಪಕ್ಕದ ಜಮೀನಿನವರು ನೋಡಿ ಕುಟುಂಬದವರಿಗೆ ತಿಳಿಸಿ,
ಹೆಚ್ಚಿನ ಚಿಕ್ಕಿತ್ಸೆಗಾಗಿ ಕೆ.ಆರ್.ನಗರ ತಾಲೂಕು ಆಸ್ಪತ್ರೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ ಎಂದು ಚನ್ನಕೇಶವನ ತಾಯಿ ಶಾಂತಮ್ಮ ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯ ಎಎಸ್ಐ ಕುಮಾರ್ ಎರಡು ರೈತ ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಸಾಂತ್ವನ: ಮಂಡಿಗನಹಳ್ಳಿ ಗ್ರಾಮದ ಆತ್ಮಹತ್ಯೆ ಮಾಡಿ ಕೊಂಡ ರೈತ ಚನ್ನಕೇಶವನ ಶವವನ್ನು ಕೆ.ಆರ್.ನಗರ ತಾಲೂಕು ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಹೊಸಅಗ್ರಹಾರ ಹೋಬಳಿಯ ಉಪತಹಶೀಲ್ದಾರ್ ಯಧುಗಿರೀಶ್ ಮತ್ತು ರಾಜಸ್ವ ನಿರೀಕ್ಷಕ ತನುರಾಜ್, ಗ್ರಾಮಲೇಕ್ಕಿಗ ರವೀಂದ್ರ ಭೇಟಿ ನೀಡಿ, ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷ ಡಿ.ವಿ.ಗುಡಿ ಯೋಗೇಶ್, ಸದಸ್ಯರಾದ ಶಂಕರ್, ರಾಮಯ್ಯ ಅವರುಗಳು ಶಾಸಕ ಸಾ.ರಾ.ಮಹೇಶ್ ಅವರ ಗಮನಕ್ಕೆ ತಂದು ಸರ್ಕಾರದಿಂದ ಸೂಕ್ತಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿ ಕುಟುಂಬದವರಿಗೆ ಸಾಂತ್ವ ಹೇಳಿದರು.