ರೋಗ ನಿರೋಧಕ ಶಕ್ತಿವೃದ್ಧಿಸಿಕೊಳ್ಳಿ : ಡಾ.ರಾಘವೇಂದ್ರ
Team Udayavani, Jul 20, 2020, 10:10 AM IST
ಮೈಸೂರು: ಕೋವಿಡ್-19ನಿಂದ ದೂರವಿರಲು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಸಲುವಾಗಿ ಆಯುಷ್ ಇಲಾಖೆಯಿಂದ ಸಂಸಮಣಿವಟಿ ಹಾಗೂ ಅರಾಕ್ ಅಜೀಬ್ ಔಷಧವನ್ನು ವಿಮಾನ ನಿಲ್ದಾಣದ ಸಿಬ್ಬಂದಿಗೆ ವಿತರಿಸಲಾಯಿತು.
ಮೈಸೂರಿನ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗದವರಿಗೆ ಆಯುಷ್ ಇಲಾಖೆಯಿಂದ ಔಷಧ ವಿತರಿಸಿ ಮಾತನಾಡಿದ ಆಯುಷ್ ಇಲಾಖೆಯ ವೈದ್ಯಕೀಯ ಅಧಿಕಾರಿ ಡಾ.ರಾಘವೇಂದ್ರ ಆಚಾರ್ಯ, ಇದು ಅಮೃತಬಳ್ಳಿಯಿಂದ ಮಾಡಲ್ಪಟ್ಟ ಔಷಧಿಯಾಗಿದ್ದು, ಮಾನವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಒಂದು ಬಾಕ್ಸ್ನಲ್ಲಿ 40 ಸಂಸಮಣಿವಟಿ ಮಾತ್ರೆಗಳಿದ್ದು, 10 ದಿನಗಳು ಬೆಳಗ್ಗೆ ಎರಡು ಹಾಗೂ ರಾತ್ರಿ ಎರಡು ಮಾತ್ರೆಗಳನ್ನು ಊಟಕ್ಕೂ ಮುಂಚೆ ಸೇವಿಸುವಂತೆ ಹಾಗೂ ಅರಾಕ್ ಅಜೀಬ್ ಯುನಾನಿ ಮೆಡಿಸನ್ ಅನ್ನು ಮಾಸ್ಕ್ ಕೈಚೌಕಗಳಿಗೆ ಸಿಂಪಡಿಸಿಕೊಂಡು ವಾಸನೆ ತೆಗೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆರೋಗ್ಯಾಧಿಕಾರಿ ಡಾ.ಸುರೇಶ್, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಮಂಜುನಾಥ್, ಗ್ರಂಥಾಲಯದ ಉಪನಿರ್ದೇಶಕ ಹಾಗೂ ಕೋವಿಡ್-19 ವಿಮಾನ ನಿಲ್ದಾಣದ ನೋಡಲ್ ಅಧಿಕಾರಿ ಬಿ.ಮಂಜುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿಗಳಾದ ಪ್ರಕಾಶ್, ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ವೇಣುಗೋಪಾಲ್ ಇತರರಿದ್ದರು.