ಕಾನೂನು ಪದವೀಧರರು ಪ್ರಶ್ನಿಸುವ ಗುಣ ಬೆಳಸಿಕೊಳ್ಳಿ
Team Udayavani, May 11, 2019, 3:00 AM IST
ಮೈಸೂರು: ಭಾರತದಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಅಂಥವರು ಮತ್ತೆ ಹುಟ್ಟುತ್ತಿಲ್ಲ. ಕಾನೂನು ಪದವೀಧರರು ಆ ಕೊರತೆಯನ್ನು ತುಂಬಬೇಕು ಎಂದು ರಂಗಕರ್ಮಿ ಶಿವಾಜಿರಾವ್ ಜಾಧವ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕಾನೂನು ಶಾಲೆ ಶುಕ್ರವಾರ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ದೇಶವೇ ಕಾನೂನು ಪಾಲಿಸಲು ಹೇಳುತ್ತೆ, ಆದರೆ, ಸ್ವಯಂಪ್ರೇರಿತರಾಗಿ ಕಾನೂನು ಪಾಲಿಸುವವರ ಸಂಖ್ಯೆ ಕಡಿಮೆ ಇದೆ. ಕಾನೂನು ಅಧ್ಯಯನ ಮಾಡಿ, ಪರೀಕ್ಷೆ ಬರೆದು ಉತ್ತೀರ್ಣರಾಗಿ ಸಾಕಷ್ಟು ಜವಾಬ್ದಾರಿ ಹೊತ್ತು ಸಮಾಜದೆಡೆಗೆ ಪಯಣ ಆರಂಭಿಸಿರುವ ನೀವುಗಳು, ಸಮಾಜದಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿ ಎಂದು ತಿಳಿ ಹೇಳುವ, ತಪ್ಪುಗಳು ಕಂಡರೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಾವೆಲ್ಲಾ ಮಕ್ಕಳಾಗಿದ್ದಾಗ ಮನೆಯಲ್ಲಿ ಶಿಸ್ತು ಕಲಿಸುತ್ತಿದ್ದರು. ನಾವದನ್ನು ಕಾನೂನು ಎಂದು ಪಾಲಿಸಿದೆವು. ಕಾನೂನನ್ನು ಮೊದಲು ನಾವು ಪಾಲನೆ ಮಾಡಿ, ಆನಂತರ ಸಮಾಜಕ್ಕೆ ತಿಳಿ ಹೇಳಿದರೆ ಅದೇ ಸಮಾಜಕ್ಕೆ ನೀವು ಕೊಡುವ ನಿಎೃಜ್ಞದ ಕೊಡುಗೆ ಎಂದು ಹೇಳಿದರು.
ರಂಗಕರ್ಮಿ ಎಚ್.ಜನಾರ್ದನ ಮಾತನಾಡಿ, ಮಾಡುವ ಕೆಲಸದಲ್ಲಿ ಬದ್ಧತೆ ಇರಬೇಕು. ಬದ್ಧತೆ ಇಲ್ಲದ ಕೆಲಸದಲ್ಲಿ ಯಶಸ್ಸು ಸಿಗಲ್ಲ. ಕಲಿಕೆ ಮೆಕ್ಯಾನಿಕ್ ಅಲ್ಲ. ಬದುಕಾಗಬೇಕು, ಆಗ ಕಲಿಕೆ ಮತ್ತು ಅಭ್ಯಾಸಕ್ಕೆ ಬೆಲೆ ಬರುತ್ತದೆ ಎಂದರು.
ದೇಶದಲ್ಲಿ ಕಾನೂನನ್ನು ಸಂಪೂರ್ಣ ತಿರುಚಿ, ನ್ಯಾಯವನ್ನೇ ಅನ್ಯಾಯದೆಡೆಗೊಯ್ದು, ಆಚಾರವನ್ನು ಭ್ರಷ್ಟಾಚಾರ ಮಾಡಿ, ಮಾನವೀಯತೆಯನ್ನು ಅಮಾನವೀಯತೆ ಮಾಡುವ ವ್ಯವಸ್ಥೆ ಜೀವಂತವಾಗುತ್ತಿದೆ. ಕಾನೂನು ಪದವೀಧರರು ಇದನ್ನು ನಾಶ ಮಾಡಿ ಸಮಾಜದಲ್ಲಿ ಸಾಮರಸ್ಯ ಬೆಳಸಬೇಕು ಎಂದರು.
ಕಾನೂನಿಗೆ ಪುನರ್ಜನ್ಮ ನೀಡಿದ ಅಂಬೇಡ್ಕರ್ ಉತ್ತರಗಳ ಸರದಾರರು. ಅವರನ್ನು ಪ್ರಶ್ನೆ ಮಾಡಲು ಸಾಧ್ಯವಾಗಲೇ ಇಲ್ಲ. ಅವರಂತೆ ನೀವೂ ಸಮಾಜ ಸುಧಾರಣೆಗೆ ಕಾರಣೀಭೂತರಾಗಿ, ಪರಿಣಿತಿ ಪಡೆದ ಕ್ಷೇತ್ರದ ಲಾಭವನ್ನು ಸಮಾಜಕ್ಕೆ ಕೊಡಿ ಎಂದು ಹೇಳಿದರು.
ಮಾನಸಗಂಗೋತ್ರಿ ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಸಿ.ಬಸವರಾಜು, ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್ ಬೆಂಜಮಿನ್ ಮೊದಲಾದವರು ಉಪಸ್ಥಿತರಿದ್ದರು.
ಚಿಣ್ಣರ ಮೇಳದಲ್ಲಿ ಓಕುಳಿಗಾಗಿ 40 ಸಾವಿರ ಲೀ. ನೀರು ಪೋಲು: ದಿನೇ ದಿನೆ ಅಂತರ್ಜಲ ಮಟ್ಟ ಕುಸಿದು ಜನ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಆದರೆ, ರಂಗಾಯಣ ಸಂಸ್ಥೆ ಚಿಣ್ಣರ ಮೇಳದ ಹೆಸರಲ್ಲಿ ಪಾಲಿಕೆಯಿಂದ 40 ಸಾವಿರ ಲೀಟರ್ ಕುಡಿಯುವ ನೀರನ್ನು ತರಿಸಿಕೊಂಡು ಓಕುಳಿ ಆಡಿ ಪೋಲು ಮಾಡಿದೆ. ಸರ್ಕಾರಿ ಸಂಸ್ಥೆ ಎಂದ ಮಾತ್ರಕ್ಕೆ ನಿಮಗ್ಯಾರು ಈ ಅಧಿಕಾರ ಕೊಟ್ಟವರು ಎಂದು ರಂಗಕರ್ಮಿ ಶಿವಾಜಿರಾವ್ ಜಾಧವ್ ಪ್ರಶ್ನಿಸಿದರು.