ರಾಮನ ಹೆಸರಿನಲ್ಲಿ ರಾವಣ ರಾಜ್ಯ ಮಾಡದಿರಿ; ಎಚ್.ಡಿ. ಕುಮಾರಸ್ವಾಮಿ
ಹಿಜಾಬ್ ವಿಚಾರ ಇಟ್ಟುಕೊಂಡು ಹಿಂದೂಪರ ಸಂಗಟನೆಗಳು ರಾಜ್ಯದ್ಯಂತ ಬೆಂಕಿ ಹಚ್ಚಿದವು
Team Udayavani, Apr 7, 2022, 3:57 PM IST
ಮೈಸೂರು: ಜೈ ಶ್ರೀರಾಮ್ ಹೆಸರೇಳಿಕೊಂಡು ರಾಜ್ಯವನ್ನು ರಾವಣ ರಾಜ್ಯ ಮಾಡದಿರಿ, ಹಿಂದುವೀ ಜಟ್ಕಾ ಕಟ್ ಮಟನ್ ಸ್ಟಾಲ್ ತೆರೆಯಲು ಅನುಮತಿ ನೀಡಿದವರ್ಯಾರು, ಮಾಂಸ ಮಾರಾಟ ಮಾಡುವವರ ಬಗ್ಗೆ ಸಸ್ಯಹಾರಿಗಳಿಗೇಕೆ ಚಿಂತೆ, ಮುಸ್ಲಿಂ ಯುವಕರು ಸಂಯಮದಿಂದಿರಿ, ನನ್ನ ಹೋರಾಟ ನಿಷ್ಕಲ್ಮಶ – ನನ್ನನ್ನು ನಂಬಿ ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಮೈಸೂರಿನಲ್ಲಿ ಆಡಿದ ಮಾತುಗಳು.
ಲೋಕನಾಯಕ ಜೆ.ಪಿ.ವಿಚಾರ ವೇದಿಕೆಯು ಬುಧವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟ – ಒಂದು ಭಾವೈಕ್ಯತೆಯ ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ನೀಡಿದ ಸಂದೇಶವಾದ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ಕರ್ನಾಟಕವನ್ನು ಹಿಂದೂ ಪರ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸಿ ಬೆಂಕಿ ಹಚ್ಚುತ್ತಿವೆ.
ಇದನ್ನು ಆರಿಸುವ ಸಲುವಾಗಿ ಸಮಾನ ಮನಸ್ಕರನ್ನು ಕಟ್ಟಿಕೊಂಡು ಭಾವೈಕ್ಯತೆಯ ಚರ್ಚೆ ಕಾರ್ಯಕ್ರಮ ಮಾಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿ ನಲ್ಲಿ ಒಂದು ಸಭೆ ಮಾಡಿದ್ದೆ. ಈಗ ಮೈಸೂರಿನಲ್ಲಿ ಎರಡನೇ ಕಾರ್ಯಕ್ರಮ ಮಾಡುತ್ತಿದ್ದು, ಇದರ ಹಿಂದೆ ಯಾವ ದುರುದ್ದೇಶ, ಚುನಾವಣೆ ರಾಜಕೀಯ ಇಲ್ಲ. ಈ ನನ್ನ ಹೋರಾಟ ನಿಷ್ಕಲ್ಮಶವಾಗಿದೆ. 2023ರ ಚುನಾವಣೆ ಮುಖ್ಯವಲ್ಲ ಬದಲಿಗೆ ರಾಜ್ಯದ ಆರೂವರೆ ಕೋಟಿ ಜನರ ಜೀವನ ಮುಖ್ಯ. ನನ್ನನ್ನು ನಂಬಿ ಎಂದರು.
ಸರ್ಕಾರದ ನಿರ್ಲಕ್ಷ್ಯವೇ ಇಷ್ಟಕ್ಕೆಲ್ಲ ಕಾರಣ:
ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಸಣ್ಣ ಸಮಸ್ಯೆಯನ್ನು ಸರ್ಕಾರ ಆಗಲೇ ಸಭೆ ನಡೆಸಿ ಬಗೆಹರಿಸಿದ್ದರೆ, ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಹಿಜಾಬ್ ವಿಚಾರ ಇಟ್ಟುಕೊಂಡು ಹಿಂದೂಪರ ಸಂಗಟನೆಗಳು ರಾಜ್ಯದ್ಯಂತ ಬೆಂಕಿ ಹಚ್ಚಿದವು. ಅದರಲ್ಲಿ ಸರ್ಕಾರ ಬೆಂಕಿ ಕಾಯಿಸಿಕೊಳ್ಳುವ ಕೆಲಸ ಮಾಡಿತು ಎಂದು ಸರ್ಕಾರದ ವಿರುದ್ಧ ವಗ್ಧಾಳಿ ನಡೆಸಿದರು.
ನ್ಯಾಯಾಲಯಗಳ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆದಿಲ್ಲವೇ: ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಮುಸಲ್ಮಾನರು ಬಂದ್ ಮಾಡಿದ್ದಾರೆ ಎಂದು ದೇಗುಲ ಮತ್ತು ಜಾತ್ರೆಗಳಲ್ಲಿ ಮುಸ್ಲಿಂರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲಾಯಿತು. ಹಾಗಾದರೆ, ಈ ಹಿಂದೆ ನ್ಯಾಯಾಲಯಗಳ ತೀರ್ಪಿನ ವಿರುದ್ಧ ಪ್ರತಿಭಟನೆ, ಬಂದ್ಗಳು ನಡೆದಿಲ್ಲವೇ ಎಂದು ಪ್ರಶ್ನಿಸಿ, ನ್ಯಾಯಾಲಯ ಆದೇಶ ಒಪ್ಪಿಗೆಯಾಗದ ಕಾರಣ ಮುಸಲ್ಮಾನರು ಸ್ವಯಂ ಪ್ರೇರಿತರಾಗಿ ಯಾವುದೇ ಗೊಂದಲ ನಿರ್ಮಾಣವಾಗದಂತೆ ಬಂದ್ ಮಾಡಿದ್ದರು. ಅದನ್ನೇ ದೊಡ್ಡ ವಿಚಾರ ಮಾಡಿ ಬೆಂಕಿ ಹಚ್ಚುವ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡುತ್ತಿವೆ.ಹಲಾಲ್ ಕಟ್ ಮಾಂಸ ಖರೀದಿಸದಂತೆ ಕರಪತ್ರ ಹಂಚಿದವರ ವಿರುದ್ಧ ಸರ್ಕಾರ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಗುಡುಗಿದರು.
ಮಟನ್ ಸ್ಟಾಲ್ ತೆರೆಯಲು ಅನುಮತಿ ನೀಡಿದವರ್ಯಾರು: ಸಂಘರ್ಷ ಹೆಚ್ಚುವಾಗಲೇ ರಾತ್ರೋರಾತ್ರಿ ಹಿಂದವೀ ಮಟನ್ ಸ್ಟಾಲ್ ತೆರೆಯಲು ಅನುಮತಿ ನೀಡಿದವರ್ಯಾರು. ಇದರ ಹಿಂದೆ ಯಾರಿ ದ್ದಾರೆ ಎಂದು ಪ್ರಶ್ನಿಸಿ, ಮಾಂಸವನ್ನೇ ತಿನ್ನದ ಸಸ್ಯಹಾರಿ ಗಳಿಗೆ ಮಾಂಸ ಮಾರಾಟ ಮಾಡುವವರ ಬಗ್ಗೆ ಚಿಂತೆ ಏಕೆ. ಇಷ್ಟು ದಿನ ಹಿಜಾಬ್, ಮುಸ್ಲಿಂ ವರ್ತಕರಿಗೆ ಮಾರಾ ಟ ನಿಷೇಧ, ಹಲಾಲ್ ಕಟ್ ವಿಚಾರದಲ್ಲಿ ಬೆಂಕಿ ಹಚ್ಚಿದವರು ಈಗ ಮಸೀದಿಯ ಮೈಕ್ಗಳ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರೈತರ ಬದುಕು ಉದ್ಧಾವಾಗಲ್ಲ: ಜೈ ಶ್ರೀರಾಮ್ ಎಂದುಕೊಂಡು ಓಡಾಡಿದರೆ ರೈತರ ಬದುಕು ಉದ್ಧಾವಾಗಲ್ಲ. ಹಾದಿ ಬೀದಿಯಲ್ಲಿರುವವರೆಲ್ಲ ಕೇಸರಿ ಬಟ್ಟೆ ಹಾಕುತ್ತಿದ್ದಾರೆ. ಜೈ ಶ್ರೀರಾಮ್ ಎಂದು ರಾವಣ ರಾಜ್ಯ ಮಾಡಬೇಡಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮುಸ್ಲಿಂ ಯುವಕರು ತಾಳ್ಮೆ ಕಳೆದುಕೊಳ್ಳದೇ ಸಂಯಮ ದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಇತಿಹಾಸ ತಜ್ಞ ಪಿ.ವಿ.ನಂಜರಾಜೇ
ಅರಸ್, ಪತ್ರಕರ್ತ ಬಿ.ಎಂ. ಹನೀಫ್, ಬಸವಲಿಂಗ ಮೂರ್ತಿ ಶರಣರು, ಮೌಲಾನಾ ಜಕಾವುಲ್ಲಾ ಸಿದ್ದೀಕಿ ಸೇರಿದಂತೆ ಅನೇಕರು ಇದ್ದರು.