ಮಹಿಳಾ, ಮಕ್ಕಳ ದಸರೆಗೆ ಸಂಭ್ರಮದ ತೆರೆ
Team Udayavani, Oct 2, 2022, 3:55 PM IST
ಮೈಸೂರು: ನಗರದ ಜೆ.ಕೆ. ಗ್ರೌಂಡ್ನಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ದಸರಾಕ್ಕೆ ಸಂಭ್ರಮದಿಂದ ತೆರೆ ಬಿದ್ದಿತು. ಶನಿವಾರ ಬೆಳಗ್ಗೆಯಿಂದ ನಡೆದ ವಿಶೇಷ ಚೇತನರ ಕ್ರೀಡಾಕೂಟ, ಮಹಿಳೆಯರು ಮತ್ತು ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹಿಳಾ ಮತ್ತು ಮಕ್ಕಳ ದಸರಾದ ಸಮಾರೋಪಕ್ಕೆ ಮೆರಗು ನೀಡಿತು.
ಸೆ.27ರಿಂದ ನಡೆದ ಕಾರ್ಯಕ್ರಮದಲ್ಲಿ ಮೊದಲ ದಿನ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸುವ ಮೂಲಕ ಆರಂಭವಾಗಿ ರಂಗೋಲಿ ಸ್ಪರ್ಧೆ, ಸಾಂಸ್ಕೃತಿ ಕಾರ್ಯಕ್ರಮ, ಆಟೋಟ ಸ್ಪರ್ಧೆ, ನೃತ್ಯ ಮತ್ತು ನಾಟಕ, ಮಿಮಿಕ್ರಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇಲಾಖೆ ಸಿಬ್ಬಂದಿಗೆ ಆಟೋಟ ಸ್ಪರ್ಧೆ, ಚಿಣ್ಣರಿಗಾಗಿ ವೇಷಭೂಷಣ ಸ್ಪರ್ಧೆ ಹಾಗೂ ಕೊನೆಯ ದಿನ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹೀಗೆ ಚಿಣ್ಣರು, ಮಹಿಳೆಯರು, ಹಿರಿಯ ನಾಗರಿಕರು, ವಿಶೇಷಚೇತನರ ಪ್ರತಿಭೆಗಳಿಗೆ ಮಹಿಳಾ ದಸರಾದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಮೂಲಕ ಚಿಣ್ಣರಿಂದ ವೃದ್ಧರವರೆಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮದ ಕೊನೆಯ ದಿನವಾದ ಶನಿವಾರ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಹಿಳೆಯರು ಹಾಗೂ ಪುರುಷ ಹಿರಿಯ ನಾಗರಿಕರಿಗೆ ಬಕೆಟ್ಗೆ ಬಾಲ್ ಎಸೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಕಿರಿಯರಿಗಿಂತ ನಾವೇನು ಕಮ್ಮಿ ಎಲ್ಲ ಎನ್ನುವಂತೆ ಅನೇಕರು ಭಾಗವಹಿಸಿ, ಎದುರಿಗಿದ್ದ ಬಕೆಟ್ಗೆ ಬಾಲ್ ಎಸೆಯುವ ಮೂಲಕ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದರು. ಒಟ್ಟಾರೆಯಾಗಿ ಮಹಿಳಾ ಮತ್ತು ಮಕ್ಕಳ ದಸರಾದಲ್ಲಿ ಮಹಿಳೆಯರಾದಿಕಯಾಗಿ ಮಕ್ಕಳು, ಯುವತಿಯರು, ವೃದ್ಧರು, ವಿಶೇಷಚೇತನರೂ ಭಾಗಿಯಾಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ವಿಜೇತರು: ಹಿರಿಯ ನಾಗರಿಕರ ಮಹಿಳೆಯ ವಿಭಾಗದಲ್ಲಿ ಎನ್.ರಮಾಮಣಿ ಪ್ರಥಮ, ವಿ.ವೆಂಕಟಮ್ಮ ದ್ವಿತೀಯ, ಜಯಮ್ಮ ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಮೈಸೂರಿನ ಬಸವಣ್ಣ ಪ್ರಥಮ, ಕೆ.ಜಿ.ಅನಂತಕೃಷ್ಣ ದ್ವಿತೀಯ ಹಾಗೂ ಎನ್.ಕೃಷ್ಣಮೂರ್ತಿ ತೃತೀಯ ಸ್ಥಾನ ಪಡೆದರು. ವಿಶೇಷಚೇತನ ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಅನಿತಾಕುಮಾರಿ ಪ್ರಥಮ, ಎಂ.ಎಸ್.ರೇಣುಕಾ ದ್ವಿತೀಯ, ಟಿ.ನರಸೀಪುರದ ಭಾರತಿ ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಪಿರಿಯಾಪಟ್ಟಣದ ಎನ್.ನಾರಾಯಣ್ ಪ್ರಥಮ, ಸರಗೂರಿನ ಜವರಾಜು ದ್ವಿತೀಯ, ಎಚ್.ಡಿ.ಕೋಟೆಯ ಎನ್ .ಜಿ.ಶಂಕರ್ ತೃತೀಯ ಸ್ಥಾನ ಪಡೆದರು.