ಸೈನಿಕರಿಗೆ ಕರ್ತವ್ಯ ನಿಷ್ಠೆ ಮುಖ್ಯ
Team Udayavani, Jul 27, 2018, 12:35 PM IST
ಹುಣಸೂರು: ಸೈನಿಕನಲ್ಲಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ದೇಶಪ್ರೇಮವಿದ್ದಲ್ಲಿ ಮಾತ್ರ ದೇಶವನ್ನು ರಕ್ಷಿಸಲು ಸಾಧ್ಯ ಎಂದು ನಿವೃತ್ತ ಯೋಧ ಶಾಂತಪ್ಪ ಹೇಳಿದರು.
ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಗಿಲ್ ಯುದ್ದ ಕರಿತು ಮಾಹಿತಿ ನೀಡಿ, ತಮ್ಮ ಸೇವಾ ಅವಧಿಯಲ್ಲಿನ ಗಡಿ ರಕ್ಷಣೆ ಕುರಿತ ಅನುಭವಗಳನ್ನು ಹಂಚಿಕೊಂಡರು. ಪ್ರತಿಯೊಬ್ಬ ಪ್ರಜೆಯೂ ಯೋಧರಿಗೆ ಕೊಡುವ ಪೂಜ್ಯಭಾವನೆ, ಅದುವೇ ದೇವರಿಗೆ ಮಾಡುವ ಆರಾಧನೆಗೆ ಸಮ, ರಾಷ್ಟ್ರಾಭಿಮಾನ ಎಲ್ಲ ಮಕ್ಕಳಲ್ಲೂ ಬೆಳೆಯಬೇಕು, ಸೇನೆ ಸೇರಿ ದೇಶ ಸೇವೆಗೆ ಮುಂದಾಗಬೇಕೆಂದು ಆಶಿಸಿದರು.
ಯೋಧ ರಾಜಶೇಖರ್ ಮಾತನಾಡಿ, ಸದಾ ಕಾಲ ಮಳೆ, ಗಾಳಿ, ಕೊರೆಯುವ ಚಳಿ ಎನ್ನದೇ ಯೋಧರು ಸದಾ ತಮ್ಮ ಜೀವನವನ್ನೇ ಪಣಕ್ಕೊಡ್ಡಿ ಹೋರಾಟ ಮಾಡುತ್ತಾರೆ. ತನ್ನ ಕುಟುಂಬವನ್ನೇ ತ್ಯಜಿಸಿ ಭೂತಾಯಿಯೇ ನನ್ನ ಮಡಿಲಿನ ಸರ್ವಸ್ವ, ಸ್ವಂತಕ್ಕೆ ಸ್ವಲ್ಪ, ರಾಷ್ಟ್ರಕ್ಕೆ ಸರ್ವಸ್ವವೆಂದು ಭಾವಿಸಿ ಸದಾ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆ. ಇಂತಹ ಯೋಧರನ್ನು ನೆನೆಯುವ ಕೆಲಸ ಸುಸ್ತಾರ್ಯ ಎಂದು ಪ್ರಶಂಸಿಸಿದರು.
ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿ, ಯೋಧರ ದೇಶಾಭಿಮಾನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕೆಂದರು. ವಿದ್ಯಾರ್ಥಿಗಳು ಸೈನಿಕರಂತೆ ಸಮವಸ್ತ್ರ ಧರಿಸಿ ರಾಷ್ಟ್ರ ಪ್ರೇಮ ಮೆರೆದರು. ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಭಾಗವಹಿಸಿ ವೀರ ಯೋಧರನ್ನು ಸ್ಮರಿಸಿದರು.