ಪೂರ್ವ ಮುಂಗಾರು: ಕೃಷಿ ಚಟುವಟಿಕೆ ಚುರುಕು
ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆ • ಹತ್ತಿ, ಹೊಗೆಸೊಪ್ಪು ನಾಟಿಗೆ ಮುಂದಾದ ತಾಲೂಕಿನ ರೈತರು
Team Udayavani, May 21, 2019, 9:43 AM IST
ಎಚ್.ಡಿ.ಕೋಟೆ: ಕಳೆದ 4-5 ದಿನಗಳಿಂದ ಎಚ್.ಡಿ. ಕೋಟೆ ಮತ್ತು ಸರಗೂರು ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು ರೈತರು ಹರ್ಷಗೊಂಡಿದ್ದಾರೆ.
ಮಾರ್ಚ್ ಮತ್ತು ಏಪ್ರಿಲ್ನಲ್ಲಿ ನಿರೀಕ್ಷಿತ ಪ್ರಮಾಣ ದಲ್ಲಿ ಪೂರ್ವ ಮುಂಗಾರು ಆಗಮನವಾಗದ ಕಾರಣ ವಾಡಿಕೆ ಮಳೆ ಆಗಿರಲಿಲ್ಲ. ಹೀಗಾಗಿ ರೈತರಲ್ಲಿ ಆತಂಕ ಮೂಡಿಸಿತ್ತು.
ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ನೀರಾ ವರಿಗಿಂತ ಖುಷ್ಕಿ ಪ್ರದೇಶವನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿದೆ. ಇಲ್ಲಿನ ರೈತರು ಹತ್ತಿ, ಹೊಗೆ ಸೊಪ್ಪನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿಸಿ ಕೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆ ಆಗದ ಪರಿಣಾಮ ರೈತರು ಕಂಗಾಲಾಗಿದ್ದರು.
ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯೊಂದಿಗೆ ಮಾರ್ಚ್ ಕೊನೇ ವಾರದಲ್ಲಿ ಬಿದ್ದ ಒಂದೆರಡು ಮಳೆಗೆ ತಮ್ಮ ಜಮೀನುಗಳನ್ನು ಹದಗೊಳಿಸಿದರೂ, ಪೂರ್ವ ಮುಂಗಾರು ಕೈಕೊಟ್ಟಿತ್ತು.
ಕಳೆದ 4-5 ದಿನದಿಂದ ತಾಲೂಕಿನ ಎಲ್ಲೆಡೆ ದಿನಲೂ ಭರ್ಜರಿ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಮಂದ ಹಾಸ ಮೂಡಿದ್ದು, ಕೃಷಿ ಚಟುವಟಿಕೆ ಚುರುಕು ಗೊಂಡಿದೆ. ತಾಲೂಕಿನೆಲ್ಲೆಡೆ ರೈತ ಕುಟುಂಬ ಬಿತ್ತನೆ ಕಾರ್ಯದಲ್ಲಿ ತೊಡಗಿದೆ.
ತಾಲೂಕುವಾರು ಮಳೆ ಪ್ರಮಾಣ: ತಾಲೂಕಿನಲ್ಲಿ ಇಲ್ಲಿಯವರೆಗೆ 170.04 ಮಿ.ಮೀ ವಾಡಿಕೆ ಮಳೆ ಯಾಗಬೇಕಿತ್ತು. ಆದರೆ, ಮೇ 17ರ ಶುಕ್ರವಾರದವರಗೆ 162.02 ಮಿ.ಮೀ ಮಳೆಯಾಗಿದೆ. ಶೇ.5 ರಷ್ಟು ಮಳೆ ಪ್ರಮಾಣ ಕೊರತೆ ಕಂಡು ಬಂದಿದ್ದರೂ, ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಹೊರತುಪಡಿಸಿ ಎಚ್.ಡಿ. ಕೋಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.
ಹೋಬಳಿವಾರು ಪ್ರಮಾಣ: ಕಸಬಾ 174.04 ವಾಡಿಕೆ ಮಳೆಗೆ, 151.06 ಮಿ.ಮೀ ಆಗಿ ಶೇ.12 ಕೊರತೆಯಾಗಿದೆ. ಅಂತರಸಂತೆ 172 ಮಿ.ಮೀ ವಾಡಿಕೆ ಮಳೆಗೆ 180.01 ಮಿ.ಮೀ ಮಳೆಯಾಗಿದ್ದು ಶೇ.5 ಹೆಚ್ಚು ಮಳೆಯಾಗಿದೆ. ಕಂದಲಿಕೆ 172.03 ವಾಡಿಕೆ ಮಳೆಗೆ 177 ಮಿ.ಮೀ ಮಳೆಯಾಗಿದ್ದು ಶೇ.3 ಹೆಚ್ಚಾಗಿದೆ. ಸರಗೂರು 169.50 ಮಿ.ಮೀ ವಾಡಿಕೆ ಮಳೆಗೆ 125.06 ಮಿ.ಮೀ ಆಗಿದ್ದು ಶೇ.26 ಕೊರತೆ ಕಂಡು ಬಂದಿದೆ. ಹಂಪಾಪುರ ಹೋಬಳಿ 162.50 ವಾಡಿಕೆ ಮಳೆಗೆ 139.01 ಮಿ.ಮೀ ಮಳೆ ಬಿದ್ದಿದ್ದು ಶೇ.14 ಕಡಿಮೆ ಮಳೆಯಾಗಿದೆ.
ಅಂತರಸಂತೆ ಹೋಬಳಿಯಲ್ಲಿ ಶೇ.5 ಹೆಚ್ಚು ಮಳೆಯಾದರೆ, ಸರಗೂರು ಹೋಬಳಿಯಲ್ಲಿ ಶೇ.26 ಕಡಿಮೆ ಮಳೆಯಾಗಿದೆ.
ಚುರುಕುಗೊಂಡ ಬಿತ್ತನೆ ಕಾರ್ಯ: ತಾಲೂಕಿನಲ್ಲಿ 67715 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿವರೆಗೆ 25790 ಹೆಕ್ಟೇರ್ (ಶೇ.38) ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಪ್ರಮುಖವಾಗಿ ಹತ್ತಿ 20280 ಹೆಕ್ಟೇರ್, ಹೊಗೆ ಸೊಪ್ಪು 1035 ಹೆಕ್ಟೇರ್, ಮುಸುಕಿನ ಜೋಳ 2400 ಹೆಕ್ಟೇರ್, ದ್ವಿ-ಧಾನ್ಯಗಳಲ್ಲಿ ಹೆಸರು 246 ಹೆಕ್ಟೇರ್, ಅಲಸಂದೆ 1250 ಹೆಕ್ಟೇರ್, ಉದ್ದು 175 ಹೆಕ್ಟೇರ್, ಎಳ್ಳು 175 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆ ಮುಗಿದಿದೆ.
ಒಟ್ಟಾರೆ ಪ್ರಾರಂಭದಲ್ಲಿ ಪೂರ್ವ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದರೂ ತಡವಾಗದರೂ ಆಗಮಿಸಿ ತಾಲೂಕಿನಾದ್ಯಂತ ಮಳೆಯಾಗುತ್ತಿರು ವುದರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ. ಉತ್ತಮ ಬೆಳೆ ನಿರೀಕ್ಷೆ ಹೊತ್ತು ದಿನಪೂರ್ತಿ ಕೃಷಿ ಚಟುವಟಿಕೆಯಲ್ಲಿ ಕುಟುಂಬ ಸಮೇತ ತೊಡಗಿಕೊಂಡಿದ್ದಾರೆ.
● ಬಿ.ನಿಂಗಣ್ಣ ಕೋಟೆ