ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದಿಂದ ಸೇಡು, ದ್ವೇಷದ ರಾಜಕಾರಣ
Team Udayavani, Sep 9, 2019, 3:00 AM IST
ಮೈಸೂರು: ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ನೀತಿ ಮೊದಲಾದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಪ್ರತಿಪಕ್ಷದ ನಾಯಕರ ವಿರುದ್ಧ ಸೇಡು, ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ದೇಶ ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, 15ವರ್ಷದಷ್ಟು ಹಿಂದಕ್ಕೆ ಕುಸಿದಿದೆ. ಜಿಡಿಪಿ ಈಗ ಶೇ.3ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ನೀಡಿರುವ ತ್ರೆçಮಾಸಿಕ ವರದಿಯಲ್ಲಿ ಶೇ.5ರಷ್ಟು ಇದ್ದರೂ ವಾಸ್ತವಿಕವಾಗಿ ಮೂರಕ್ಕೆ ಬಂದು ನಿಂತಿದೆ ಎಂದು ಹೇಳಿದರು.
ವಾಹನ ತಯಾರಿಕಾ ಕಂಪನಿ ದಿವಾಳಿಯಾಗಿ ಅರ್ಧಕ್ಕಿಂತಲೂ ಹೆಚ್ಚು ತಯಾರಾದ ವಾಹನ ಮಾರಾಟವಾಗದೆ ಇದೆ. ಖರೀದಿ ಶಕ್ತಿ ಕಡಿಮೆಯಾಗಿದೆ. ಉದ್ಯೋಗಕ್ಕೆ ಕೊಡಲಿ ಪೆಟ್ಟು ಬಿದ್ದು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ದೂರಿದರು.
ಜಿಡಿಪಿ ಹೊಡೆತ: ಆರ್ಬಿಐ ವರದಿ ಪ್ರಕಾರ ನೋಟು ಅಮಾನ್ಯಿಕರಣಗೊಳಿಸಿದ್ದು ಆರ್ಥಿಕತೆ ಕುಸಿಯಲು ಕಾರಣವೆಂದು ಹೇಳಿದೆ. ಜಿಡಿಪಿ ಹೊಡೆತದಿಂದ ದೇಶ ಕಠಿಣ ಪರಿಸ್ಥಿತಿಗೆ ಸಿಲುಕಿದೆ. ಆರ್ಬಿಐನಿಂದ 1ಲಕ್ಷ ಕೋಟಿ, 76ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಗಿದೆ. ಆದರೆ, ಈ ಹಣವನ್ನು ಯಾವ ರೀತಿ ಖರ್ಚು ಮಾಡಬೇಕು, ಏನು ಮಾಡಬೇಕು ಎನ್ನುವ ದೂರದರ್ಶಿತ್ವ ಇಲ್ಲ ಎಂದು ಕಿಡಿಕಾರಿದರು.
ನೆರೆ ಪರಿಹಾರ ಇಲ್ಲ: ರಾಜ್ಯದಲ್ಲಿ ಪ್ರವಾಹ ಉಂಟಾಗಿ 1ಲಕ್ಷ ಕೋಟಿ ರೂ.ನಷ್ಟು ಹಾನಿಯಾಗಿದೆ. ಜನ ಸಂಕಷ್ಟದಲ್ಲಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ನಯಾ ಪೈಸೆ ಕೊಟ್ಟಿಲ್ಲ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ 10ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಹೇಳಿದರೂ ಇನ್ನು ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಂದ್ರಯಾನ ವೀಕ್ಷಣೆಗೆ ಬಂದಿದ್ದ ಪ್ರಧಾನಿ ಸೌಜನ್ಯಕ್ಕಾದರೂ ನೆರೆಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಜನರ ಸಮಸ್ಯೆ ಆಲಿಸಲಿಲ್ಲ. ಹೋಗಲೀ ಅಂದರೆ ಪರಿಹಾರ ಹಣ ಕೊಡುವ ಭರವಸೆ ಕೊಡದೆ ಹಾಗೆಯೇ ಹೋಗಿದ್ದಾರೆ. ಕೇಂದ್ರ ಈಗಲಾದರೂ ಸೇಡಿನ ರಾಜಕಾರಣ ಬದಿಗೊತ್ತಿ ಜನರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿದರು.
ಯುಪಿಎ ಸ್ಪಂದಿಸಿತ್ತು: ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ಸತ್ತ ಮೇಲೆ ಬಂದು ತಿಥಿ ಮಾಡಲು ಬರೋದು ಬೇಡ. ರೋಗಿ ಆಸ್ಪತ್ರೆಗೆ ಹೋದಾಗ ಚಿಕಿತ್ಸೆ ಕೊಡಬೇಕೇ ಹೊರತು ಸತ್ತ ಮೇಲೆ ಕೊಡುವುದಲ್ಲ ಎಂದರು. ರಾಜ್ಯದಲ್ಲಿ 25ಜನ ಸಂಸದರನ್ನು ಗೆಲ್ಲಿಸಿ ಕೊಟ್ಟಿರುವ ಕರ್ನಾಟಕದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ನೀತಿ ತಾಳುತ್ತಿದೆ. ಹಿಂದಿನ ಯುಪಿಎ ಸರ್ಕಾರ ನೆರೆ ಬಂದಾಗ ತಕ್ಷಣ ಪರಿಹಾರ ಕೊಟ್ಟಿತ್ತು.
ಆದರೆ, ಈಗ ಕೇಂದ್ರ ಏನು ಮಾತನಾಡಿಲ್ಲ ಎಂದು ದೂರಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಮುನಿಸಿಗೆ ರಾಜ್ಯದ ಜನರ ಮೇಲೆ ವಕ್ರದೃಷ್ಟಿ ತೋರಬಾರದು. ರಾಜ್ಯದ ಜನರ ಸಮಸ್ಯೆಗೆ ಆದ್ಯತೆ ಕೊಡಿ. ಯಡಿಯೂರಪ್ಪ ಮೇಲಿನ ಸಿಟ್ಟು, ಅಸಮಾಧಾನಕ್ಕೆ ಪರಿಹಾರ ಕೊಡಲು ವಿಳಂಬ ಮಾಡಬಾರದು ಎಂದು ಟೀಕಿಸಿದರು.
ಬ್ಲಾಕ್ಮೇಲ್ ತಂತ್ರ: ಪ್ರತಿಪಕ್ಷದ ನಾಯಕರನ್ನು ಬ್ಲಾಕ್ಮೇಲ್ ಮಾಡಿ ಬಿಜೆಪಿಗೆ ಬನ್ನಿ ಎನ್ನುತ್ತಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಲುಕಿದ್ದ ಮುಕುಲ್ ರಾಯ್ ಬಿಜೆಪಿಗೆ ಸೇರಿದ ಬಳಿಕ ಸಂಪನ್ನರಾಗಿ ಬಿಟ್ಟರೇ. ನೀವು ಬಿಜೆಪಿಗೆ ಸೇರಿದರೆ ಏನು ಮಾಡಲ್ಲವೆಂದು ಹೇಳಿ ಬೆದರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿಯುವ ಕೆಲಸ ಮಾಡುತ್ತಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಆರ್.ಮೂರ್ತಿ, ಕಾರ್ಯದರ್ಶಿಗಳಾದ ಎಸ್.ಶಿವನಾಗಪ್ಪ, ಗುರುಪಾದಸ್ವಾಮಿ ಇದ್ದರು.
ಸ್ವಾಯತ್ತ ಸಂಸ್ಥೆ ದುರ್ಬಳಕೆ: ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಸ್ಥಿತಿ ಇನ್ನಿತರ ವೈಫಲ್ಯ ಮುಚ್ಚಿಕೊಳ್ಳಲು ಜನರ ಅಭಿಪ್ರಾಯವನ್ನು ಬೇರೆ ಕಡೆ ತಿರುಗಿಸಲು ಕುತಂತ್ರ ನಡೆಸಿ ದೇಶಾದ್ಯಂತ ಪ್ರತಿಪಕ್ಷದ ನಾಯಕರ ಧ್ವನಿ ಅಡಗಿಸುವ ಕೆಲಸಕ್ಕ ಮುಂದಾಗಿದೆ. ಸ್ವಾಯತ್ತ ಸಂಸ್ಥೆ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪಿ.ಚಿದಂಬರಂ, ಡಿ.ಕೆ.ಶಿವಕುಮಾರ್ ಬಂಧಿಸಿ ಮಾನಸಿಕ ಕಿರುಕುಳ ನೀಡುತ್ತಿದೆ. ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಎಲ್ಲಾ ರೀತಿಯ ಸಹಕಾರ ನೀಡಿದ್ದರೂ ಬಂಧಿಸಿರುವುದು ಖಂಡನೀಯ. ಮೋದಿ ಅವರ ಏಕಚಕ್ರಾಧಿಪತ್ಯ, ಸರ್ವಾಧಿಕಾರ ಆಡಳಿತ ಅತ್ಯಂತ ಸೇಡು, ದ್ವೇಷದ ರಾಜಕೀಯವಾಗಿದೆ ಎಂದು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…