ಹಿಂಗಾರು ರಾಗಿ ಖರೀದಿಸದಿದ್ದರೆ ಹೋರಾಟ
ಕಾಮಗೌಡನಹಳ್ಳಿಯಲ್ಲಿ ರೈತ ಸಂಘ, ಹಸಿರು ಸೇನೆ ಘಟಕ ಉದ್ಘಾಟನೆ
Team Udayavani, Feb 25, 2021, 6:29 PM IST
ಹುಣಸೂರು: ರಾಗಿ ಖರೀದಿ ಕೇಂದ್ರದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ರಾಗಿಯನ್ನು ಖರೀದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಜಯರಾಂ ಎಚ್ಚರಿಕೆ ನೀಡಿದರು.
ತಾಲೂಕಿನ ಕಾಮಗೌಡನಹಳ್ಳಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಹನಗೋಡು ಹೋಬಳಿಯ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಸಂಘಟಿತರಾದಲ್ಲಿ ಮಾತ್ರ ನ್ಯಾಯ ಪಡೆದುಕೊಳ್ಳಲು ಸಾಧ್ಯ, ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಗ್ರಾಮಘಟಕ ಆರಂಭಿಸಲಾಗುವುದು. ರೈತರ ವಿಚಾರದಲ್ಲಿ ಅಧಿಕಾರಿಗಳ ಮನೋಭಾವ ಬದಲಾಗಬೇಕು. ಕೃಷಿ ಇಲಾಖೆ ನಿರ್ಲಕ್ಷ್ಯದಿಂದಾಗಿ ತಂಬಾಕು ಮತ್ತಿತರ ಬೆಳೆಗಳ ನಂತರ ಈ ಭಾಗದಲ್ಲಿ ಹಿಂಗಾರು ಬೆಳೆಯಾಗಿ ರಾಗಿ ಬೆಳೆದಿದ್ದು, ಆದರೆ, ಸಮೀಕ್ಷೆಯಲ್ಲಿ ಕೈಬಿಡಲಾಗಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ತೊಂದರೆಯಾಗಿದೆ. ಸರ್ಕಾರ ತಕ್ಷಣ ಹಿಂಗಾರಿನ ರಾಗಿ ಬೆಳೆಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಸಂಘದವತಿಯಿಂದ ಪ್ರತಿಭಟಿಸ ಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ಚಿಕ್ಕೇಗೌಡ, ನರಸಾಚಾರಿ, ಸಣ್ಣಜವರನಾಯ್ಕ, ಮೂರ್ತಿ, ತಮ್ಮೇಗೌಡ, ಸಂಘದ ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ಜಿಲ್ಲಾ ಮತ್ತು ತಾಲೂಕಿನ ಪದಾಧಿಕಾರಿಗಳಾದ ಕುಮಾರ್ ಬೋವಿ, ಅಣ್ಣೇಗೌಡ, ತೀರ್ಥಕುಮಾರ್, ರಾಜಯ್ಯ, ರೇವಣ್ಣ, ಶ್ರೀನಿವಾಸ್, ಚಿಕ್ಕನಂಜಯ್ಯ, ರಾಜಣ್ಣ, ನಿಂಗಮ್ಮ, ಅನುಸೂಯಮ್ಮ, ಚಂದ್ರಶೇಖರ್, ಗ್ರಾಮಘಟಕದ ಅಧ್ಯಕ್ಷರಾದ ಪ್ರಕಾಶ್, ದೇವನಾಯ್ಕ, ಮಾದನಾಯ್ಕ, ಸ್ವಾಮಿ, ನಾಗರಾಜ್ ಇತರರಿದ್ದರು.