ಕೆರೆ ಒತ್ತುವರಿ ತೆರವಿಗೆ ರೈತರ ಆಗ್ರಹ
Team Udayavani, Jul 14, 2018, 12:15 PM IST
ನಂಜನಗೂಡು: ತಾಲೂಕಿನ ಕೆರೆಗಳ ಅಕ್ರಮ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಶುಕ್ರವಾರ ತಾಲೂಕು ರೈತ ಸಂಘದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ದೇಬೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಾದ್ಯಂತ ಅನೇಕ ಕೆರೆಗಳನ್ನು ಕೆರೆಯಂಗಳದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಸ್ವಯಂ ಪ್ರೇರಿತರಾಗಿ ಕೆರೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಂತೆ ಮಾಡಬೇಕೆಂದು ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವಿಕರಿಸಿದ ತಹಶೀಲ್ದಾರ್ ದಯಾನಂದ್ ಮಾತನಾಡಿ, ಕೆರೆ ಒತ್ತು¤ವರಿ ಅಕ್ಷಮ್ಯ ಅಪರಾಧವಾಗಿದ್ದು ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಪರಶಿವಮೂರ್ತಿ, ಡಿ.ಡಿ.ಪಾಪಣ್ಣ, ಮಂಜುನಾಥ್, ರಮೇಶ್, ಮಾಜಿ ಉಪಾಧ್ಯಕ್ಷೆ ಸರೋಜಮ್ಮ, ಜನ ಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ನಗರ್ಲೆ ವಿಜಯ್ ಕುಮಾರ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಬಂಗಾರಸ್ವಾಮಿ ಭಾಗವಹಿಸಿದ್ದರು.