ರಾಗಿ ಕಟಾವಿಗೆ ಮಧ್ಯವರ್ತಿಗಳ ಹಾವಳಿ, ಬೆಲೆ ನಿಗದಿಗೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ
Team Udayavani, Dec 13, 2021, 6:59 PM IST
ಪಿರಿಯಾಪಟ್ಟಣ: ರಾಗಿ ಬೆಳೆಯನ್ನು ಕಟಾವು ಮಾಟಲು ತಮಿಳುನಾಡು ಮೂಲದ ಯಂತ್ರಗಳು ತಾಲ್ಲೂಕಿಗೆ ಆಗಮಿಸಿದ್ದು ಮಧ್ಯವರ್ತಿಗಳ ಮೂಲಕ ಅಧಿಕ ಹಣ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಸೋಮವಾರ ತಹಶೀಲ್ದಾರ್ ಕೆ.ಚಂದ್ರಮೌಳಿ ಹಾಗೂ ಕೃಷಿ ಸಹಾಯಕ ನಿರ್ದೆಶಕ ಪ್ರಸಾದ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಬೂದಿತಿಟ್ಟು ರವಿಚಂದ್ರ ಮಾತನಾಡಿ ಈ ಬಾರಿ ತಾಲ್ಲೂಕಿನಾಧ್ಯಂತ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯನ್ನು ಬೆಳೆಯಲಾಗಿದ್ದು, ಈಗ ರಾಗಿ ಬೆಳೆಯು ಕಟಾವಿಗೆ ಬಂದು ನಿಂತಿದೆ ಸರ್ಕಾರವು ರಾಗಿ ಕಟಾವು ಮಾಡಲು ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರತಿ ಎಕರೆಗೆ ರೂ.2700 ನಿಗದಿ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈ ಬಗ್ಗೆ ಈ ವರೆಗೂ ಯಾವುದೇ ಆದೇಶ ಬಾರದಿರುವುದರಿಂದ ರೈತರು ಗೊಂದಲದಲ್ಲಿದ್ದು, ಇದನ್ನೆ ದುರ್ಬಳಕೆ ಮಾಡಿಕೊಂಡು ಕೆಲವು ಮಧ್ಯವರ್ತಿಗಳು ತಾಮಿಳುನಾಡು ಮೂಲದ ಯಂತ್ರಗಳ ಮಾಲೀಕರು ನೀಡುವ ಕಮಿಷನ್ ಆಸೆಯಿಂದ ರೈತರಿಂದ ರೂ.3800 ಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕೀಡಾಗಿದ್ದು ಇದರ ಬಗ್ಗೆ ಸೂಕ್ತ ಕ್ರಮ ವಹಿಸಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮರೀಗೌಡ, ರೈತ ಮುಖಂಡರಾದ ಅಣ್ಣೇಗೌಡ, ಶಂಕರ್, ಭರತ್, ಮೋಹನ್, ಮುತ್ತರಾಜು, ರಂಜು, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರೈತರು ಬೆಳೆದಿರುವ ರಾಗಿಯನ್ನು ಕಟಾವು ಮಾಡಲು ತಮಿಳುನಾಡು ಮೂಲದ ಯಂತ್ರಗಳು ತಾಲ್ಲೂಕಿಗೆ ಆಗಮಿಸಿದ್ದು, ಇವುಗಳನ್ನು ಮಧ್ಯವರ್ತಿಗಳು ಹಣದ ಆಸೆಗೆ ಒಳಗಾಗಿ ಅಧಿಕ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ರೈತ ಅತೀವೃಷ್ಠಿಗೆ ತುತ್ತಾಗಿ ನಷ್ಟ ಅನುಭವಿಸಿದ್ದು, ಮತ್ತೆ ಅವನನ್ನು ಕೆಲವು ಮಧ್ಯವರ್ತಿಗಳು ಶೋಷಣೆ ಮಾಡುತ್ತಿರುವುದು ಕಂಡು ಬಂದಿದ್ದು ಈ ವಿಷಯವಾಗಿ ಜಂಟಿ ಕೃಷಿ ನಿರ್ದೆಶಕರಿಗೆ ಪತ್ರ ಬರೆಯಲಾಗಿದೆ.-ಪ್ರಸಾದ್, ಸಹಾಯಕ ಕೃಷಿ ನಿರ್ದೆಶಕರು ಪಿರಿಯಾಪಟ್ಟಣ