ಗೊಮ್ಮಟನಿಗೆ 69ನೇ ಮಸ್ತಕಾಭಿಷೇಕ
Team Udayavani, Dec 3, 2018, 11:14 AM IST
ಹುಣಸೂರು: ಜೈನರ ಪವಿತ್ರ ಸ್ಥಳ ತಾಲೂಕಿನ ಗೊಮ್ಮಟಗಿರಿಯ ಗೋಮಟೇಶ್ವರ ಮೂರ್ತಿಗೆ ಭಾನುವಾರ 69ನೇ ಮಸ್ತಕಾಭಿಷೇಕ ನಡೆಯಿತು. ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಬಳಿಯ ದಿಗಂಬರ ಜೈನ ಅತಿಶಯ ಕ್ಷೇತ್ರ ಗೊಮ್ಮಟಗಿರಿಯ ವಿರಾಟ್ಯೋಗಿ ಗೋಮಟೇಶ್ವರ ಮೂರ್ತಿಗೆ ಮೊದಲು ಜಲಾಭಿಷೇಕ ಸಮರ್ಪಿಸಲಾಯಿತು.
ನಂತರ ಅರ್ಚಕರಾದ ಪುಷ್ಪದಂತ ಇಂದ್ರ, ಧರಣೇಂದ್ರ, ಸರ್ವೇಶ್ ಅವರ ಮಂತ್ರಘೋಷಗಳ ನಡುವೆ ಹೊಬುಜ ಮಠದ ಸ್ವಾಮೀಜಿಯವರು ಎಳನೀರು, ಕ್ಷೀರ, ಕಷಾಯ, ಅರಶಿನ, ಕೇಸರಿ, ಅಷ್ಟಗಂಧ, ಕುಂಕುಮ, ಭತ್ತದ ಅರಳು, ಸಕ್ಕರೆ, ಕಲ್ಕಚೂರ್ಣ(ಅಕ್ಕಿಹಿಟ್ಟು), ಅಷ್ಟಗಂಧ, ಚಂದನ, ಕಂಕಚೂರ್ಣ, ಪುಷ್ಪ, ಕನಕವೃಷ್ಟಿ ಕೊನೆಯಲ್ಲಿ ಚತುಷ್ಕಾಭಿಷೇಕ ಸೇರಿ ವಿವಿಧ ಅಭಿಷೇಕ ನೆರವೇರಿಸಿದರು.
ಪ್ರತಿ ಅಭಿಷೇಕದ ಸಂದರ್ಭದಲ್ಲೂ ಗೋಮಟೇಶ್ವರ ಮೂರ್ತಿ ಒಂದೊಂದು ಮಾದರಿಯಲ್ಲಿ ಭಕ್ತರಿಗೆ ವಿವಿಧ ವರ್ಣಗಳಿಂದ ದರ್ಶನ ನೀಡಿದ್ದು ಗಮನ ಸೆಳೆಯಿತು. ಗೋಮಟನ ಪಾದದಡಿಯಲ್ಲಿ ನಿಂತು ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿದ್ದ ಭಕ್ತರು, ಭಜನೆ ಮಾಡುತ್ತಾ, ಜೈಕಾರ ಹಾಕುವ ಮೂಲಕ ಭಾವಪರವಶವಾದರು.
ಮಹಿಳೆಯರಿಗೂ ಅವಕಾಶ: ಹಿಂದೆಲ್ಲ ಅರ್ಚಕರು ಹಾಗೂ ಕಳಸ ಹರಾಜಿನಲ್ಲಿ ತಮ್ಮದಾಗಿಸಿಕೊಂಡ ಕುಟುಂಬದವರು ಮಾತ್ರ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ಇದೇ ಪ್ರಥಮ ಬಾರಿಗೆ ಸ್ವಾಮೀಜಿಗಳೊಂದಿಗೆ ಮಹಿಳೆಯರೂ ಗೋಮಟೇಶ್ವರ ಮೂರ್ತಿಗೆ ಅಭಿಷೇಕ ಮಾಡಿದ್ದು ವಿಶೇಷವಾಗಿತ್ತು.
ಸೆಲಿ ಗೀಳು: ಈ ಅಭಿಷೇಕಕ್ಕೆ ಸುತ್ತಮುತ್ತಲ ಗ್ರಾಮಗಳವರಲ್ಲದೆ ದೂರದ ಊರುಗಳಿಂದ ಬಂದಿದ್ದ ಮಂದಿ, ಬೆಟ್ಟ ಹತ್ತಿ ದರ್ಶನ ಪಡೆದರು. ತೀರ್ಥಂಕರರ ಪಾದಕೂಟ, ಜಲ ಮಂದಿರಕ್ಕೆ ಭೇಟಿ ನೀಡಿ ನಮಿಸಿದರು. ಯುವಜನತೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ದೃಶ್ಯ ಕಂಡು ಬಂತು.
ಅಭಿಷೇಕಕ್ಕೂ ಮುನ್ನ ಬೆಟ್ಟದ ಕೆಳಗಿನ ಸಭಾಭವನದ ಆವರಣದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀಕ್ಷೇತ್ರದ ಡಾ.ದೇವೇಕೀರ್ತಿ ಭಟ್ಟಾರಕ ಪಟ್ಟಾರಕವರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕ ಸಭೆ, ಕಳಸ ಹರಾಜಿನ ನಂತರ ಮಧ್ಯಾಹ್ನದ ನಂತರ ಬೆಟ್ಟದ ಮೇಲಿನ ಗೋಮಟನಿಗೆ ವಿವಿಧ ಅಭಿಷೇಕಕ್ಕೆ ಸ್ವಾಮೀಜಿಯವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕಳಸ ಹರಾಜು: ಹರಾಜಿಲ್ಲಿ ಕಳಸ ತಮ್ಮದಾಗಿಸಿಕೊಂಡಿದ್ದ ಬೆಂಗಳೂರಿನ ನಾಗರತ್ನ, ವಿನುತಾಜೈನ್, ಶ್ರೀಧರ್, ಕಿರಣ್ಕುಮಾರ್, ಸಂತೋಷಕುಮಾರ್, ಹುಣಸೂರಿನ ಮೋಹನ್ ಲಾಲ್ ಮಾರು ಅವರು ತಮ್ಮ ಕುಟುಂಬ ಸಮೇತರಾಗಿ ಸ್ವಾಮೀಜಿಗಳೊಂದಿಗೆ ಮೆಟ್ಟಿಲು ಹತ್ತಿ ವಿವಿಧ ಅಭಿಷೇಕ ನೆರವೇರಿಸಿದರು.
ಭೋಜನ ವ್ಯವಸ್ಥೆ: ಮಸ್ತಕಾಭಿಷೇಕಕ್ಕೆ ಬಂದ ಎಲ್ಲರಿಗೂ ಸಮಿತಿಯಿಂದ ಉಪಾಹಾರ ಒದಗಿಸಲಾಗಿತ್ತು. ಭಕ್ತರು ಬೆಟ್ಟ ಹತ್ತಿ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಮಸಾಲೆಪುರಿ, ಬಿಸಿಲು ಹೆಚ್ಚಿದ್ದರಿಂದ ಕಬ್ಬಿನ ಹಾಲಿಗೆ ಜನ ಮುಗಿ ಬಿದ್ದರು. ಇನ್ನು ಸಿಹಿತಿಂಡಿ ಅಂಗಡಿಗಳು, ಮಕ್ಕಳ ಆಟಿಕೆಗಳು, ಮಹಿಳೆಯರಿಗೆ ಬೇಕಾದ ಬಳೆ, ಮುಂತಾದ ವಸ್ತುಗಳನ್ನು ಒಳಗೊಂಡ ಅಂಗಡಿಗಳು ಇದ್ದವು.
ಖಾಸಗಿ ಬಸ್ ಹಾಗೂ ಮೈಸೂರು ನಗರದಿಂದ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಸ್ತಕಾಭಿಷೇಕದಲ್ಲಿ ಸಮಿತಿ ಕಾರ್ಯದರ್ಶಿ ಎಂ.ವಿ.ಶಾಂತಕುಮಾರ್, ಖಜಾಂಚಿ ಪಿ.ಆಂತಕುಮಾರ್, ಚಂದ್ರಕುಮಾರ್, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಜರಿದ್ದರು. ಎಸ್ಐ ಮಾದ್ಯನಾಯ್ಕ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.