ಕುಡಿವ ನೀರು ಕಲ್ಪಿಸಲು ಗ್ರಾಪಂ ನಿರ್ಲಕ್ಷ್ಯ
Team Udayavani, Apr 7, 2020, 3:21 PM IST
ಎಚ್.ಡಿ.ಕೋಟೆ: ಕುಡಿವ ನೀರಿನ ಸಂಪರ್ಕ ಕೈಕೊಟ್ಟು ವಾರಗಳೇ ಕಳೆದರೂ ಗಾಪಂ ದುರಸ್ತಿಗೆ ಮುಂದಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಾಲೆಯಲ್ಲಿ ಹರಿಯುವ ನೀರಿಗೆ ಮೊರೆ ಹೋಗಿರುವ ಘಟನೆ ಶೀರನಹುಂಡಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ನೂರಲಕುಪ್ಪೆ ಗ್ರಾಪಂ ವ್ಯಾಪ್ತಿಯ ಶೀರನ ಹುಂಡಿ ಗ್ರಾಮದ ದಲಿತ ಕೇರಿಗೆ ಸಂಪರ್ಕ ಕಲ್ಪಿಸಿದ್ದ ಕುಡಿವ ನೀರಿನ ಸಂಪರ್ಕ ಕೈಕೊಟ್ಟು ವಾರಗಳೇ ಉರುಳಿದರೂ ದುರಸ್ತಿಗೆ ಮುಂದಾಗಿಲ್ಲ. ಗ್ರಾಪಂ ಅಲ್ಲದೆ, ತಾಪಂ ಇಒಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಇದರಿಂದ ಕುಡಿವ ನೀರಿಗಾಗಿ ಮಹಿಳೆಯರು, ಪುರುಷರು ಅನ್ನದೇ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಗ್ರಾಮದ ಹೊರವಲದಲ್ಲಿ ಹರಿಯುತ್ತಿರುವ ನಾಲೆಯ ಅಶುದ್ಧ ನೀರಿಗೆ ಮೊರೆ ಹೋಗಬೇಕಾಗಿದೆ. ಬೇಸಿಗೆಯಲ್ಲಿ ಅಶುದ್ಧ ನೀರಿನ ಸೇವನೆಯಿಂದ ರೋಗ ಹರಡುವ ಭೀತಿ ಇದ್ದರೂ ಅನ್ಯ ಮಾರ್ಗ ಕಾಣದೇ ಕಲುಷಿತ ನೀರನ್ನೇ ಬಳಕೆ ಮಾಡಬೇಕಿದೆ.
ಕೆಲವೊಮ್ಮೆ ಕುಡಿವ ನೀರಿಗಾಗಿ ಗ್ರಾಮದ ಹೊರ ವಲಯದಲ್ಲಿರುವ ಪಂಪ್ಸೆಟ್ಗಳ ಮೊರೆ ಹೋದರೆ ಜಮೀನಿನ ಮಾಲೀಕರು ಬರಬೇಡಿ ಎಂದು ಧಮಕಿ ಹಾಕುತ್ತಾರೆ. ಕಲುಷಿತ ನೀರಿನ ಸೇವನೆಯಿಂದ ಅನಾ ರೋಹ್ಯ ಅವರಿಸಿಕೊಳ್ಳುವ ಮುನ್ನ ಇನ್ನಾದರೂ ಸಂಬಂಧ ಪಟ್ಟವರು ನೀರಿನ ಸಂಪರ್ಕ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.