ಸಾ.ರಾ.ಮಹೇಶ್ ನನ್ನ ಮೇಲೆ ಮಾಡಿರುವ ಆರೋಪಗಳನ್ನ ಸಾಬೀತು ಮಾಡಲಿ: ವಿಶ್ವನಾಥ್
Team Udayavani, Oct 15, 2019, 1:31 PM IST
ಮೈಸೂರು: ಮಾಜಿ ಸಚಿವ ಸಾ.ರಾ.ಮಹೇಶ್ ಪದೇ ಪದೆ ತಮ್ಮನ್ನು 25 ಕೋಟಿಗೆ ಮಾರಿಕೊಂಡಿದ್ದಾರೆ ಎಂದು ಟೀಕಿಸುತ್ತಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಮಾರಿಕೊಂಡಿದ್ದೇನೆ ಎಂದ ಮೇಲೆ ಕೊಂಡು ಕೊಂಡವನು ಯಾರು ಎಂದು ಅವರಿಗೆ ಗೊತ್ತಿರಬೇಕಲ್ಲ, ಕೊಂಡು ಕೊಂಡವನನ್ನು ಗುರುವಾರ ಬೆಳಗ್ಗೆ 9 ಗಂಟೆಗೆ ಕರೆ ತಂದು ಸತ್ಯ ಮಾಡಲಿ, ಇಲ್ಲವಾದಲ್ಲಿ ಹಿಟ್ ಅಂಡ್ ರನ್ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ರಾಜಕೀಯ ಕಾರಣಗಳಿಗಾಗಿ ಹುಣಸೂರು ಜಿಲ್ಲೆಯ ಪ್ರಸ್ತಾಪ ಮಾಡುತ್ತಿಲ್ಲ. ಅಲ್ಲಿನ ಜನರ ಭಾವನೆಗೆ ಧ್ವನಿಯಾಗಿದ್ದೇನೆ ಎಂದು ತನ್ನ ಮೇಲಿರುವ ಆರೋಪಗಳಿಗೆ ಉತ್ತರಿಸದರು.
ಹೊಸ ಜಿಲ್ಲೆಯನ್ನು ಭೌಗೋಳಿಕವಾಗಿ ಕಿಲೋಮೀಟರ್ ನಲ್ಲಿ ಅಳೆಯುವುದಲ್ಲ, ಜನರ ಭಾವನಾತ್ಮಕ ವಿಚಾರ. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಜಿಲ್ಲೆ ವಿಭಜಿಸಿ ಚಾಮರಾಜನಗರ ಜಿಲ್ಲೆ ಮಾಡಿದ್ದನ್ನೇಕೆ ವಿರೋಧಿಸಲಿಲ್ಲ ಎಂದು ಎಚ್.ವಿಶ್ವನಾಥ್ ಪ್ರಶ್ನಿಸಿದರು.