ಪರೀಕ್ಷೆ ನಡೆಸಿ ರಾಜ್ಯ ಸರ್ಕಾರ ಜೀವ ,ಜೀವನ ಎರಡನ್ನೂ ತೆಗೆಯಲು ಹೊರಟಿದೆ: ವಿಶ್ವನಾಥ್
Team Udayavani, Jun 29, 2021, 1:25 PM IST
ಮೈಸೂರು: ಜಗತ್ತಿನ ಹೊಸ ಸಮಸ್ಯೆಯನ್ನ ಲೆಕ್ಕಿಸದೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ನಾನು ಹೇಳಿದ್ದೆ ಸರಿ, ನಾನು ಮಾಡಿದ್ದೆ ಸರಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಶಿಕ್ಷಣ ಇಲಾಖೆ ತುಂಬಾ ಸೂಕ್ಷ್ಮ ಇಲಾಖೆ. ರಾಜ್ಯದ ಪ್ರತಿ ಮನೆಯೂ ಇಲಾಖೆ ವ್ಯಾಪ್ತಿಯಲ್ಲಿದೆ ಎಂದರು.
ಇನ್ನು ಹತ್ತು ಹನ್ನೆರಡು ದಿನದಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚಾಗತ್ತದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಶಿಕ್ಷಣ ಪ್ರತಿ ಮಗುವಿನ ಹಕ್ಕು, ಆದರೆ ಮಗುವನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದೇವೆ. ಎಲ್ಲರೂ ಸೇರಿ ಮಗುವನ್ನ ಸಾಯಿಸುತ್ತಿದ್ದೇವೆ ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ಸಭೆ ಮೇಲೆ ಸಭೆ ನಡೆಸುತ್ತೀರಿ. ಈ ವಿಚಾರದಲ್ಲಿ ನಿಮಗೆ ಗೊತ್ತಾಗಲಿಲ್ಲವೇ? ಪರೀಕ್ಷೆ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ:ಪರೀಕ್ಷೆ ವಿಚಾರಕ್ಕೆ ಸುರೇಶ್ ಕುಮಾರ್- ಸುಧಾಕರ್ ಜಟಾಪಟಿ: ಗೊಂದಲ ಬೇಡವೆಂದ ಸಿಎಂ ಬಿಎಸ್ ವೈ
ಕೇಂದ್ರ ಸರ್ಕಾರವೇ ತೀರ್ಮಾನ ಮಾಡಿ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಕೇಂದ್ರ ಸರ್ಕಾರ ಎಲ್ಲಾ ಯೋಚನೆ ಮಾಡಿ, ಸಲಹೆ ಪಡೆದೆ ತೀರ್ಮಾನ ಮಾಡಿದೆ. ಆದರೆ ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಯಾಕೆ ಎಸ್ಎಸ್ಎಲ್ ಸಿ ಪರೀಕ್ಷೆ ಮಾಡುತ್ತಿದೆ. ಮೊದಲು ಜೀವ ಉಳಿಸಿಕೊಳ್ಳಿ ಎಂದು ಮೋದಿಯೇ ಹೇಳಿದ್ದಾರೆ ಆದರೆ ರಾಜ್ಯ ಸರ್ಕಾರ ಜೀವ ,ಜೀವನ ಎರಡನ್ನೂ ತೆಗೆಯಲು ಹೊರಟಿದೆ ಎಂದು ವಿಶ್ವನಾಥ್ ಆರೋಪಿಸಿದರು.
ಕಾಸರಗೋಡು ಭಾಗದಲ್ಲಿ ಕನ್ನಡ ನಾಮಫಲಕ ತೆರವು ವಿಚಾರವಾಗಿ ಮಾತನಾಡಿದ ಅವರು, ಕಾಸರಗೋಡು ಜಿಲ್ಲೆ ನಮ್ಮದೇ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಪತ್ರ ಬರೆದು ಸುಮ್ಮನಾಗುವುದಲ್ಲ. ಮಂಜೇಶ್ವರ ಶಾಸಕ ಅಶ್ರಫ್ ಕನ್ನಡದಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಕಾಸರಗೋಡು ಉಳಿವಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.