ಹನೂರು: ಹಳೇ ಪಿಂಚಣಿಯನ್ನೇ ಮುಂದುವರಿಸಿ
Team Udayavani, Oct 4, 2018, 4:30 PM IST
ಹನೂರು: ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನೇ ಜಾರಿ ಮಾಡಬೇಕೆಂದು ಆಗ್ರಹಿಸಿ ಎನ್ಪಿಎಸ್ ನೌಕರರ ಸಂಘದ ವತಿಯಿಂದ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ರಕ್ತದಾನಕ್ಕೂ ಮುನ್ನಾ ಆಸ್ಪತ್ರೆ ಆವರಣದಲ್ಲಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಎನ್ಪಿಎಸ್ ಸಂಘದ ಹನೂರು ಘಟಕಾಧ್ಯಕ್ಷ ಪ್ರದೀಪ್ಕುಮಾರ್ ಮಾತನಾಡಿ, ಪಿಂಚಣಿ ಸರ್ಕಾರಿ ನೌಕರರಿಗೆ ಆರ್ಥಿಕ ಭದ್ರತೆಯ ಸೌಲಭ್ಯವಾಗಿದ್ದು, ನಮ್ಮ ಹಕ್ಕಾಗಿದೆ. ಆದರೆ, ಸರ್ಕಾರ ಹಳೇ ಪಿಂಚಣಿ ರದ್ದುಪಡಿಸಿ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದರಿಂದ ನೌಕರರಿಗೆ ಯಾವುದೇ ಪ್ರಯೋಜನವಿಲ್ಲ. ಕಳೆದ 4 ವರ್ಷದಿಂದ ರಾಜ್ಯಾದ್ಯಂತ ಹಲವು ಹೋರಾಟ ಮಾಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರಿ ನೌಕರರು ರಕ್ತದಾನ ಮಾಡಿ ಮೂಲಕ ಗಮನ ಸೆಳೆಯಲಾಗುತ್ತಿದೆ ಎಂದರು ತಿಳಿಸಿದರು.
ಇದೇ ವೇಳೆ 40 ಸರ್ಕಾರಿ ನೌಕರರು ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ
ಸಂಘದ ಅಧ್ಯಕ್ಷ ಮಂಗಲ ಫ್ರಾನಿಸ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷ ಸಿದ್ದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾನ್ಬ್ರಿಟ್ಟೋ, ಕಾರ್ಯದರ್ಶಿ ಗಿರೀಶ್, ಸದಸ್ಯರಾದ ರೂಪಾಶ್ರೀ, ಮರಿಯಮ್ಮ, ಶಿವರಾಜಮ್ಮ, ಗುರುಸ್ವಾಮಿ, ಮಾದೇಶ್, ಎನ್ಪಿಎಸ್ ಸಂಘದ ಕಾರ್ಯದರ್ಶಿ ಪ್ರೀತಮ್ ಇದ್ದರು.