ಹುಣಸೂರು ತಾಲೂಕಲ್ಲಿ ಭಾರೀ ಮಳೆ
Team Udayavani, Jun 4, 2018, 2:31 PM IST
ಹುಣಸೂರು: ತಾಲೂಕಿನ ಹನಗೋಡು ಭಾಗದಲ್ಲಿ ಒಂದು ಗಂಟೆ ಕಾಲ ಸುರಿದ ಭಾರೀ ಮಳೆಗೆ ಹತ್ತಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದರೆ, ಹೊಲಗದ್ದೆಗಳು ಜಲಾವೃತಗೊಂಡು ಬೆಳೆನಾಶವಾಗಿವೆ.
ಶನಿವಾರ, ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತಗೊಂಡು, ಕೆರೆಗಳಂತೆ ಗೋಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಕೊಚ್ಚಿ ಹೋಗಿವೆ. ರೈತರು ಮಳೆ ಬಂದಿದೆ ಎಂದು ಒಂದೆಡೆ ಹರ್ಷಚಿತ್ತರಾಗಿದ್ದರೆ, ಮತ್ತೂಂದೆಡೆ ಸಾಲ ಮಾಡಿ ಬೆಳೆದ ಬೆಳೆ ಕೊಚ್ಚಿ ಹೋಗಿದ್ದರಿಂದ ಆತಂಕದಲ್ಲಿದ್ದಾರೆ.
ಹನಗೋಡಿಗೆ ಸಮೀಪದ ಕಿರಂಗೂರು, ಹಿಂಡಗುಡ್ಲು, ದಾಸನಪುರ, ದೊಡ್ಡಹೆಜೂjರು, ಭಾರತವಾಡಿ, ಮಾದಹಳ್ಳಿ, ಹರಳಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ 1.30ಯಿಂದ 2.30ರವರೆಗೆ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಬೆಳೆಗಳು ಹಾಗೂ ಈ ಭಾಗದ ರಸ್ತೆಗಳು ಕೊಚ್ಚಿ ಹೋಗಿ ವಾಹನ, ಜನಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ತಂಬಾಕು, ಶುಂಠಿ, ಮೆಣಸಿನಕಾಯಿ, ಬಾಳೆ ಬೆಳೆ ಸೇರಿದಂತೆ ಇತರೆ ಬೆಳೆಗಳು ಕೊಚ್ಚಿ ಹೋಗಿವೆ. ಅಲ್ಲದೆ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿದೆ.
ಕಳೆದೊಂದು ವಾರದಿಂದ ಈ ಭಾಗದಲ್ಲಿ ನಿತ್ಯ ಮಳೆಯಾಗುತ್ತಿದೆ. ಮೊದಲೇ ಜಮೀನು ಶೀತ ಹಿಡಿದಿತ್ತು. ಇದೀಗ ಬಿದ್ದಿರುವ ಭಾರೀ ಮಳೆಯು ಬೆಳೆಯನ್ನೂ ಸಂಪೂರ್ಣ ಹಾಳು ಮಾಡುವ, ಕೊಚ್ಚಿಕೊಂಡು ಹೋಗುವಷ್ಟರ ಮಟ್ಟಿಗೆ ಸುರಿದಿದೆ.
ಪರಿಹಾರಕ್ಕೆ ಆಗ್ರಹ: ಈ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಕೋಟ್ಯಂತರ ರೂ. ನಷ್ಟ ಉಂಟಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕೋಡಿ ಬಿದ್ದ ಕೆರೆಗಳು: ಒಂದೇ ಗಂಟೆಯಲ್ಲಿ ಸುರಿದ ಮಳೆಗೆ ತಾಲೂಕಿನ ದೊಡ್ಡಹೆಜೂjರಿನ ಕೆರೆ, ದಾಸನಪುರದ ಹೊಸಕೆರೆ, ಭಾರತವಾಡಿಯ ಗರಿಕೆ ಕಟ್ಟೆ, ಕಲ್ಲೂರಪ್ಪನ ಬೆಟ್ಟದಕೆರೆ, ಮಾದಳ್ಳಿಕೆರೆ, ಕಿರಂಗೂರಿನ ಮಠದಕಟ್ಟೆ, ಹುಲಿಕೆರೆ ಸೇರಿದಂತೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತರಲ್ಲಿ ಹರ್ಷ ಮೂಡಿದ್ದರೂ, ಕಷ್ಟಪಟ್ಟು ಬೇಸಾಯ ಮಾಡಿದ್ದ ಬೆಳೆಗಳು ಕಣ್ಮುಂದೆಯೇ ನಾಶವಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.