ಕಾಳಬೂಚನಹಳ್ಳಿಯಲ್ಲಿ ಬಿರುಗಾಳಿ-ಮಳೆಗೆ ಹಾರಿ ಹೋದ ಮನೆಯ ಮೇಲ್ಛಾವಣಿ
Team Udayavani, May 7, 2022, 9:35 PM IST
ಹುಣಸೂರು : ನಾಗರಹೊಳೆ ಉದ್ಯಾನದಂಚಿನ ಹನಗೋಡು ಭಾಗದ ಗ್ರಾಮಗಳಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಭಾರಿ ಬಿರುಗಾಳಿ ಮಳೆಗೆ ಮನೆ-ಬ್ಯಾರನ್ಗಳ ಮೇಲ್ಛಾವಣಿ ಹಾರಿಹೋಗಿದೆ, ಹೆಂಚುಗಳು ಪುಡಿಪುಡಿಯಾಗಿವೆ, ಮನೆ ಮುಂದಿನ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ತಾಲೂಕಿನ ನೇರಳಕುಪ್ಪೆ ಗ್ರಾಪಂ. ವ್ಯಾಪ್ತಿಯ ಕಾಳಬೋಚನಹಳ್ಳಿ ಗ್ರಾಮದ ತಮ್ಮೇಗೌಡರ ಮನೆಯ ಕಲ್ನಾರ್ ಶೀಟುಗಳು ಹಾಗೂ ಲಕ್ಕೇಗೌಡರ ವಾಸದ ಮನೆ ಹೆಂಚುಗಳು ಸಾಕಷ್ಟು ದೂರ ಹಾರಿಹೋಗಿದ್ದರೆ, ಕೆಂಪನಿಂಗೇಗೌಡರಿಗೆ ಸೇರಿದ ತಂಬಾಕು ಹದ ಮಾಡುವ ಬ್ಯಾರನ್ ಮನೆ ಬಿರುಗಾಳಿಗೆ ಸಿಲುಕಿ ಹೆಂಚುಗಳು ಹಾರಿ ಅನಾಹುತ ಸೃಷ್ಟಿಸಿದೆ. ಸ್ವಾಮಿನಾಯಕರ ಮನೆ ಮುಂದಿದ್ದ ಸಿಲ್ವರ್ ಮರ ಮುರಿದು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮಾದೇಗೌಡರ ಕೊಟ್ಟಿಗೆಗೆ ಸುತ್ತ ಅಳವಡಿಸಿದ್ದ ತಗಡು ಶೀಟುಗಳು ಸಹ ನಾಶವಾಗಿವೆ. ಅಲ್ಲದೆ ಕುಮಾರ್ರವರ ಮನೆ ಮುಂದಿನ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದು, ವಿದ್ಯುತ್ ಸ್ಥಗಿತಗೊಂಡಿದೆ.
ಮನೆಯೊಳಗಿದ್ದವರು ಹೊರಗೋಡಿ ಬಂದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಮನೆಯೊಳಗಿದ್ದ ದವಸ-ಧಾನ್ಯ ಬಟ್ಟೆಗಳು ಮಳೆ ನೀರಿನಲ್ಲಿ ತೋಯ್ದು ಹೋಗಿವೆ. ಇದೇ ರೀತಿ ಅಕ್ಕ-ಪಕ್ಕದ ಗ್ರಾಮಗಳಲ್ಲೂ ಸಣ್ಣ-ಪುಟ್ಟ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಸುಮಂತ್ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : ಎರಡು ಪ್ರತ್ಯೇಕ ಪ್ರಕರಣ: ಐವರು ದರೋಡೆಕೋರರ ಬಂಧನ