ಹುಣಸೂರು : ಕೊಟ್ಟಿಗೆಯಲ್ಲಿದ್ದ ಕರುವನ್ನೇ ಹೊತ್ತೊಯ್ದ ಚಿರತೆ : ಜೀವ ಭಯದಲ್ಲಿ ಗ್ರಾಮಸ್ಥರು
Team Udayavani, Jun 1, 2022, 8:31 PM IST
ಹುಣಸೂರು : ಕೊಟ್ಟಿಗೆಗೆ ದಾಳಿ ಇಟ್ಟ ಚಿರತೆಯು ಕರುವನ್ನು ಜೋಳದ ಹೊಲಕ್ಕೆ ಹೊತ್ತೊಯ್ದು ಸಂಪೂರ್ಣ ತಿಂದು ಹಾಕಿರುವ ಘಟನೆ ಹನಗೋಡು ಹೋಬಳಿಯ ಮುದಗನೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಮುದಗನೂರು ಗ್ರಾಮದ ರಾಜೇಗೌಡರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ ಕರುವನ್ನು ಚಿರತೆಯು ರಾತ್ರಿ ಪಕ್ಕದ ಜೋಳದ ಹೊಲಕ್ಕೆ ಹೊತ್ತೊಯ್ದು ಕರುವನ್ನು ಸಂಪೂರ್ಣ ತಿಂದುಹಾಕಿದೆ.
ಘಟನಾ ಸ್ಥಳಕ್ಕೆ ವೀರನಹೊಸಳ್ಳಿ ವನ್ಯಜೀವಿ ವಿಭಾಗದ ಡಿ.ಆರ್.ಎಫ್.ಒ. ಚಂದ್ರೇಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗ್ರಹ;
ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು ರೈತರು ಜೀವಭಯ ಭೀತರಾಗಿದ್ದು ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಮುದಗನೂರು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ್ ಆಗ್ರಹಿಸಿದ್ದಾರೆ.
ಮತ್ತೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡರೆ ಸೆರೆಹಿಡಿಯಲು ಬೋನ್ ಇರಿಸಲಾಗುವುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.