ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಇಬ್ಬರು ವಕೀಲರು ನೀರುಪಾಲು, ಇನ್ನೋರ್ವ ಪಾರು
ರಕ್ಷಣಾ ತಂಡದಿಂದ ಶೋಧಕಾರ್ಯ ಪತ್ತೆಯಾಗದ ದೇಹ
Team Udayavani, Jul 29, 2022, 10:00 PM IST
ಹುಣಸೂರು : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಬಿನಿ ಬಲದಂಡೆ ನಾಲೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ವಕೀಲರು ನಿರುಪಾಲಾಗಿದ್ದು ಮತ್ತೊರ್ವ ವಕೀಲ ಕಾರಿನಿಂದ ಜಿಗಿದು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸರಗೂರಿನ ಸಾಗರೆ ಕಬಿನಿ ಬಲದಂಡೆ ನಾಲೆಬಳಿ ಶುಕ್ರವಾರ ಸಂಜೆ ನಡೆದಿದೆ.
ಹುಣಸೂರಿನ ವಕೀಲರಾದ ಉಂಡವಾಡಿಯ ಸಿ.ದಿನೇಶ್(46) ಹಾಗೂ ಗಿರೀಶ್(44), ಸಾವನ್ನಪ್ಪಿದವರು, ಅಶೋಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಿನೇಶರಿಗೆ ಪತ್ನಿ, 3 ವರ್ಷದ ಒಂದು ಗಂಡು ಮಗುವಿದೆ. ಗಿರೀಶರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಟ್ಟೆಮಳಲವಾಡಿಯ ಅಶೋಕ್ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿರೋದಿಷ್ಟು:
ಪ್ರಕರಣವೊಂದರ ಸಂಬಂಧ ಎಚ್.ಡಿ.ಕೋಟೆಗೆ ತೆರಳಿದ್ದ ಮೂವರು ವಕೀಲರು ಊಟ ಮಾಡಲು ಕಬಿನಿ ಡ್ಯಾಂಬಳಿಯ ಬಿದರಹಳ್ಳಿ ಸರ್ಕಲ್ನ ಹೋಟೆಲ್ಗೆ ತೆರಳಿದ್ದರು, ವಾಪಸ್ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಸಾಗರೆ ಬಳಿಯ ಬೆಟ್ಟಯ್ಯನ ಸೇತುವೆಗೆ ಅಳವಡಿಸಿದ್ದ ತಡೆಗೋಡೆಗೆ ಗುದ್ದಿ ಕಬಿನಿ ಬಲದಂಡೆ ನಾಲೆಗೆ ಬಿದ್ದಿದೆ.
ಈ ವೇಳೆ ಅಶೋಕ್ ಕಾರಿನಿಂದ ಹೊರಕ್ಕೆ ಜಿಗಿದು ಈಜಿ ದಡ ಸೇರಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿ.ಡಿ.ದಿನೇಶ್ ಹಾಗೂ ಗಿರೀಶ್ ಶವಕ್ಕಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲೆಯಲ್ಲಿ ನೀರು ಕಡಿಮೆ ಮಾಡಲು ಕಬಿನಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ರಾತ್ರಿಯಾಗಿದ್ದರಿಂದಾಗಿ ಬೆಳಗ್ಗೆ ಶವವನ್ನು ಹುಡುಕಲಾಗುವುದೆಂದು ಡಿವೈ ಎಸ್ಪಿ ರವಿಪ್ರಸಾದ್ ತಿಳಿಸಿದ್ದಾರೆ.