ಹುಣಸೂರು: ಮಳೆಗೆ 40ಕ್ಕೂ ಹೆಚ್ಚು ಮನೆ ಹಾನಿ, ಬೆಳೆ ಹಾನಿ, ಲಕ್ಷಾಂತರ ರೂ. ನಷ್ಟ
Team Udayavani, Aug 3, 2022, 10:19 PM IST
ಹುಣಸೂರು: ಕಳೆದ ಮೂರು ದಿನಗಳಿಂದ ನಗರ ಸೇರಿದಂತೆ ತಾಲೂಕಿನಾದ್ಯಂತ ಸುರಿಯುತ್ತಿರುವ ಬಿರುಗಾಳಿ,ಗುಡುಗು ಸಹಿತ ಮಳೆಗೆ ಹನಗೋಡು ಹೋಬಳಿ ಸೇರಿದಂತೆ ತಾಲೂಕಿನ ವಿವಿಧೆಡೆ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸಾಕಷ್ಟು ಬೆಳೆಯೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ನಗರದ ಕಲ್ಕುಣಿಕೆ ಹತ್ತಿಮರದ ಬೀದಿಯ ಲಕ್ಷ್ಮಣ್, ಬಿಳಿಕೆರೆ ಹೋಬಳಿಯ ಹಂದನಹಳ್ಳಿಯಲ್ಲಿ ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದೆ, ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾ.ಪಂ.ಸದಸ್ಯ ರಂಗಯ್ಯ, ಹೆಗ್ಗಂದೂರಿನ ಬಸಪ್ಪರ ಪುತ್ರ ಗಣೇಶ ಹಾಗೂ ತುಂಡು ಹೆಬ್ಬಳ್ಳ ಗ್ರಾಮದ ಜಯಮ್ಮಸೋಮಣ್ಣರಿಗೆ ಸೇರಿದ ಮನೆಗಳು ಮೇಲ್ಚಾವಣಿ ಸಹಿತ ಬಿದ್ದು ಹೋಗಿದೆ.
ರಾತ್ರಿ ಸುರಿದ ಮಳೆಗೆ ಮನೆಯಲ್ಲಿ ಮಲಗಿದ್ದ ವೇಳೆಯೇ ಮನೆ ಬಿದ್ದು ಹೋಗಿದ್ದು. ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದರೆ. ಮನೆಯಲ್ಲಿದ್ದ ಬಟ್ಟೆ, ದವಸ ಧಾನ್ಯ, ಪಾತ್ರೆ ಪದಾರ್ಥಗಳಿಗೆ ಹಾನಿಯಾಗಿದೆ.
ಬೆಳೆ ಹಾನಿ
ಉಡುವೇಪುರದ ರೈತ ರವಿ ಹುಚ್ಚೇಗೌಡರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆ, ಚನ್ನಸೋಗೆಯ ಮಹದೇವರಿಗೆ ಸೇರಿದ ತಂಬಾಕು ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು , ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಮನೆಯೊಳಗೆ ತುಬಿದ ಮಳೆ ನೀರು
ನಾಗರಹೊಳೆ ಉದ್ಯಾನವನದ ಹನಗೋಡು ಹೋಬಳಿಯ ಹೆಬ್ಬಳ್ಳ, ತುಂಡುಹೆಬ್ಬಳ್ಳ, ಉಡುವೆಪುರ, ಹನಗೋಡು, ಕಾಳಬೂಚನಹಳ್ಳಿ, ನೇರಳೆಕುಪ್ಪೆ ,ನೇಗತ್ತೂರು, ಶಿಂಡೇನಹಳ್ಳಿ, ಕೊಳವಿಗೆ ಗ್ರಾಮಗಳಲ್ಲೂ ಬಾರೀ ಮಳೆಯಾಗಿದ್ದು, ಮನೆಯೊಳಗೆ ತುಂಬಿದ್ದ ಮಳೆ ನೀರನ್ನು ರಾತ್ರಿಯಿಂದ ಬೆಳಗಿನ ಜಾವದ ವರೆಗೂ ಮನೆಯವರು ಹೊರ ಹಾಕುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾದಂತಿತ್ತು. ವಿ?Àಯ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.
ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ 40 ಮನೆಗಳು ಬಿದ್ದು ಹೋಗಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಪ್ರಾಥಮಿಕ ವರದಿ ಬಂದಿದ್ದು, ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ತಹಶೀಲ್ದಾರ್ ಡಾ.ಅಶೋಕ್ ಉದಯವಾಣಿಗೆ ಮಾಹಿತಿ ನೀಡಿದರು.
ಶಿತ ಭಾದೆ ಭೀತಿ,ರೈತರ ಆತಂಕ: ಕಳೆದ ತಿಂಗಳು ಬಿದ್ದ ಮಳೆಯಿಂದ ತಂಬಾಕು ಶುಂಠಿ ಮತ್ತಿತರ ಬೆಳೆಗಳು ಶೀತ ಬಾಧೆಗೊಳಗಾಗಿತ್ತು, ಹಾಕಿದ್ದ ರಸಗೊಬ್ಬರ ನೀರು ಪಾಲಾಗಿತ್ತು ಹೀಗಾಗಿ ರೈತರು ಮತ್ತೊಮ್ಮೆ ಗೊಬ್ಬರ ನೀಡಿದ್ದಾರೆ. ಇದೀಗ ಮತ್ತೆ ಮಳೆ ಆರಂಭವಾಗಿದ್ದು ಮುಂದುವರೆದಲ್ಲಿ ತಂಬಾಕು, ಶುಂಠಿ ಬೆಳೆ ಶೀತಬಾಧೆಯಿಂದ ಕೊಳೆಯುವ ಸ್ಥಿತಿ ತಲುಪಲಿದ್ದು ರೈತರು ಆತಂಕಕ್ಕೀಡಾಗಿದ್ದಾರೆ.