ಕೋವಿಡ್ಕೇರ್ ಸೆಂಟರ್ ಸ್ವಚ್ಚಗೊಳಿಸಿದ ತಾ.ಪಂ. ಇ.ಓ ಗಿರೀಶ್, ಸಾಥ್ ನೀಡಿದ ಮೋಹನ್ಕುಮಾರ್.
ಅಧಿಕಾರಿಗಳ ಕಾರ್ಯಕ್ಕೆ ನಾಚಿ ನಾವೇ ಸ್ವಚ್ಚಗೊಳಿಸಿಕೊಳ್ಳುತ್ತೇವೆಂದ ಸೋಂಕಿತರು.
Team Udayavani, May 23, 2021, 7:10 PM IST
ಹುಣಸೂರು: ತಾಲೂಕು ಮಟ್ಟದ ಅಧಿಕಾರಿಗಳಿಬ್ಬರು ಯಾವುದೇ ಅಹಂ ತೋರದೆ, ಅಳುಕಿಲ್ಲದೆ ಪಿ.ಪಿ.ಕಿಟ್ ಧರಿಸಿಕೊಂಡು ಕೋವಿಡ್ ಕೇರ್ ಸೆಂಟರ್ ನನ್ನು ಸಂಪೂರ್ಣ ಸ್ವಚ್ಚಗೊಳಿಸಿ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಪಂಚಾಯತ್ ನ ಇಓ ಗಿರೀಶ್ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್ಕುಮಾರ್ ರವರೇ ಕೋವಿಡ್ ಕೇರ್ ಸೆಂಟರನ್ನು ಸ್ವಚ್ಚಗೊಳಿಸಿ ಗಮನ ಸೆಳೆದಿದ್ದಾರೆ.
ಬಿಳಿಕೆರೆ ಬಳಿಯ ಸಬ್ಬನಹಳ್ಳಿಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಗೆ ಜಿಲ್ಲಾ ನೋಡಲ್ ಅಧಿಕಾರಿ ಜಯರಾಂ ಧಿಡೀರ್ ಭೇಟಿ ನೀಡಿದ್ದ ವೇಳೆ ಸೋಂಕಿತರು ಶುಚಿತ್ವ ಇಲ್ಲವೆಂದು ದೂರುತ್ತಿದ್ದರು. ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಪೌರಕಾರ್ಮಿಕ ಸಹ ಒಳಾವರಣ, ಶೌಚಾಲಯ ಸ್ವಚ್ಚತೆಗೆ ಹಿಂದೇಟು ಹಾಕಿದ್ದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇ 27 ರಿಂದ 31ರವರೆಗೆ ಸಂಪೂರ್ಣ ಲಾಕ್ಡೌನ್ : ಜಿಲ್ಲಾಧಿಕಾರಿ
ಕೇಂದ್ರಕ್ಕೆ ಭೇಟಿ ನೀಡಿದ್ದ ಇಓ ಗಿರೀಶ್ ರಿಗೆ ಕೇಂದ್ರದ ಒಳ ವ್ಯವಸ್ಥೆಯನ್ನು ವೀಕ್ಷಿಸುವ ತವಕ, ಮತ್ತೊಂದೆಡೆ ಪೌರಕಾರ್ಮಿಕ ಭಯಪಟ್ಟುಕೊಂಡು ಸ್ವಚ್ಚತೆಗೆ ಹಿಂಜರಿದಾಗ ಸಮಾಜ ಕಲ್ಯಾಣಾಧಿಕಾರಿ ಮೋಹನ್ ಜೊತೆಗೂಡಿ ಪಿ.ಪಿ.ಕಿಟ್ ಧರಿಸಿ ಒಳ ಹೊಕ್ಕಿದ ಈ ಅಧಿಕಾರಿಗಳು ಸೋಂಕಿತರ ಸಮ್ಮುಖದಲ್ಲೇ ಪೊರಕೆ ಕೈಯಲ್ಲಿಡಿದು ಕಸ ಗುಡಿಸಿದರು, ಇಡೀ ಕೇಂದ್ರವನ್ನು ನೀರಿನಿಂದ ಸ್ವಚ್ಚಗೊಳಿಸಿ, ಫಿನಾಯಲ್ ಸಿಂಪಡಿಸಿದರಲ್ಲದೆ ಶೌಚಾಲಯಕ್ಕೂ ನೀರು ಹಾಕಿ ಅಂದಗೊಳಿಸಿದರು. ಸಮಾಜ ಕಲ್ಯಾಣಾಧಿಕಾರಿ ಮೋಹನ್ಕುಮಾರ್ರವರು ಒಂದು ಕಡೆಯಿಂದ ನೆಲವನ್ನು ಒರೆಸಿ, ಕಸವನ್ನುವಿಲೇವಾರಿ ಮಾಡಿ ಇಡೀ ಕಟ್ಟಡವನ್ನು ಸ್ಯಾನಿಟೈಸ್ಗೊಳಿಸಿ ಸೋಂಕಿತರ ಮನಗೆದ್ದರು.
ಅಧಿಕಾರಿಗಳೇ ಮುಂದೆ ನಿಂತು ಸ್ವಚ್ಚಗೊಳಿಸಿದ್ದನ್ನು ಗಮನಿಸಿದ ಪೌರಕಾರ್ಮಿಕ ನಾನು ನಾಳೆಯಿಂದ ಪಿ.ಪಿ.ಕಿಟ್ ಧರಿಸಿ ಸ್ವಚ್ಚಗೊಳಿಸುವುದಾಗಿ ಇಓ. ಗಿರೀಶ್ರಿಗೆ ವಾಗ್ದಾನ ಮಾಡಿದರು.
ದೂರಿದ್ದ ಸೋಂಕಿತರು ಅಧಿಕಾರಿಗಳೇ ಸ್ವಚ್ಚ ಮಾಡುತ್ತಿರುವುದನ್ನು ಕಂಡು ಅವಕ್ಕಾದರು. ತಮ್ಮ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದರಲ್ಲದೇ ನಮಗೆ ಸ್ವಚ್ಚತಾ ಪರಿಕರ ಕೊಡಿ, ನಾಳೆಯಿಂದ ನಾವೇ ನಮ್ಮ ಕೊಠಡಿಗಳನ್ನು ಶುಚಿಗೊಳಿಸಿಕೊಳ್ಳುತ್ತೇವೆ. ಸಿಬ್ಬಂದಿಗಳು ವರಾಂಡವನ್ನು ಶುಚಿಗೊಳಿಸಿಕೊಟ್ಟು, ಕಸ ವಿಲೇವಾರಿ ಮಾಡಿಕೊಟ್ಟರೆ ಸಾಕೆಂದು ಮನವಿ ಮಾಡಿದರು. ಅಧಿಕಾರಿಗಳಿಬ್ಬರ ಸೇವಾ ಕಾರ್ಯವನ್ನು ಶಾಸಕ ಎಚ್.ಪಿ.ಮಂಜುನಾಥರು ಸೇರಿದಂತೆ ಸಾರ್ವಜನಿಕರು, ಅಧಿಕಾರಿ ಮಿತ್ರರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ತಹಸೀಲ್ದಾರ್ ಬಸವರಾಜ್, ಇ.ಓ.ಗಿರೀಶ್,ಸಮಾಜಕಲ್ಯಾಣಾಧಿಕಾರಿ ಮೋಹನ್ ಜೊತೆಗೆ ಕೆಲವರು ಹಗಲು ರಾತ್ರಿ ಎನ್ನದೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಅಧಿಕಾರಿಗಳೂ ಇವರ ಮಾದರಿಯಲ್ಲೇ ಎಲ್ಲರೂ ಕೆಲಸ ಮಾಡಿದರೆ ತಾಲೂಕು ಮಾತ್ರವಲ್ಲ, ರಾಜ್ಯದಿಂದಲೇ ಕೋವಿಡ್ ಹೊಡೆದೋಡಿಸಬಹುದು, ಆದರೆ ಬದ್ದತೆಯಿಂದ ಕಾರ್ಯ ಕೈಗೊಳ್ಳಬೇಕು.
ಶಾಸಕ ಎಚ್.ಪಿ.ಮಂಜುನಾಥ್.
ಇದನ್ನೂ ಓದಿ : ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಕೋವಿಡ್ ಗೆ ಬಲಿ