ಬಡವರಿಗೆ ನ್ಯಾಯ ಒದಗಿಸಿದರೆ ಆತ್ಮ ತೃಪ್ತಿ
Team Udayavani, May 19, 2018, 12:52 PM IST
ಹುಣಸೂರು: ವಕೀಲರನ್ನೇ ದೇವರೆಂದು ನಂಬಿ ಬಂದ ಅಮಾಯಕರಿಗೆ ಸಹಾಯ ಮಾಡಿ ನ್ಯಾಯ ಒದಗಿಸಿದರೆ ಆತ್ಮ ತೃಪ್ತಿ ಸಿಗುತ್ತದೆ ಎಂದು ಇಲ್ಲಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜಯಶ್ರೀ ಹೇಳಿದರು. ತಾಲೂಕು ವಕೀಲರ ಸಂಘದ ವತಿಯಿಂದ ಮೈಸೂರಿಗೆ ವರ್ಗಾವಣೆಗೊಂಡಿರುವ ನ್ಯಾಯಾಧೀಶರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯಾಲಯಕ್ಕೆ ನಾಗರಿಕರು ಏನಾದರೂ ಅನ್ಯಾಯ, ದೌರ್ಜನ್ಯ, ಕಷ್ಟಕ್ಕೊಳಗಾಗಿದ್ದರೆ ಮಾತ್ರ ಬರುತ್ತಾರೆ. ಅಂತವರಿಗೆ ನ್ಯಾಯ ಕೊಡಿಸುವುದು ವಕೀಲರ ಕರ್ತವ್ಯ. ಸಂಕಷ್ಟದಲ್ಲಿರುವ ಬಡವರಿಗೆ ಕಾನೂನು ಸೇವಾ ಸಮಿತಿ ಉಚಿತ ಕಾನೂನು ನೆರವು ನೀಡುವ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಮೂರ್ತಿ ಮಾತನಾಡಿ, ಬಡ ಕಕ್ಷಿದಾರರು ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಬಂದಾಗ ಅವರಿಗೆ ಕಾನೂನು ಸೇವಾ ಸಮಿತಿ ಉಚಿತ ಕಾನೂನು ನೀಡುವ ಬಗ್ಗೆ ತಿಳಿಸಿಕೊಡಬೇಕು. ಕೇವಲ ಹಣಕ್ಕಾಗಿಯೇ ವಕೀಲಿ ವೃತ್ತಿ ಮಾಡದೆ ಮಾನವೀಯ ದೃಷ್ಟಿಕೋನದಲ್ಲಿ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಿರಿಯ ಸಿವಿಲ್ ನ್ಯಾಯಾಶೆ ಜಿ.ದೀಪಾ, ಪಬ್ಲಿಕ್ ಪ್ರಾಸಿಕ್ಯೂಟರ್ ಮಂಜುಳಾ, ಎಪಿಪಿ ರೇಖಾ, ಎಜಿಪಿ ವೆಂಕಟೇಶ್, ಶಿವಣ್ಣೇಗೌಡ, ವಕೀಲರ ಸಂಘದ ಕಾರ್ಯದರ್ಶಿ ದಿನೇಶ್ ಮಾತನಾಡಿದರು. ಎಪಿಪಿ ನಾರಾಯಣ್, ವಕೀಲರ ಸಂಘದ ಉಪಾಧ್ಯಕ್ಷ ಲಕ್ಷ್ಮಣ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.