ಟೆಸ್ಟ್ ನಡೆಸಿ, ನೆಗೆಟಿವ್ ಬಂದರೆ ಝೂ ಪ್ರವೇಶ ನೀಡಲು ಚಿಂತನೆ
Team Udayavani, Jun 24, 2021, 9:55 PM IST
ಮೈಸೂರು: ಮೃಗಾಲಯದ ಆವರಣದಲ್ಲಿ ಕೊರೊನಾ ಪರೀಕ್ಷೆ ಕೇಂದ್ರ ತೆರೆದು ಪ್ರವಾಸಿಗರಿಗೆ ರ್ಯಾಟ್ ಟೆಸ್ಟ್ ನಡೆಸಿ, ನೆಗೆಟಿವ್ ಬಂದವರಿಗೆ ಪ್ರವೇಶ ನೀಡಲು ಚಿಂತನೆ ನಡೆದಿದೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದರು. ಮೈಸೂರಿನಚಾಮರಾಜೇಂದ್ರ ಮೃಗಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಲಾಕ್ ಡೌನ್ ಬಳಿಕ ಮೈಸೂರು, ಬನ್ನೇರುಘಟ್ಟ ಮೃಗಾಲಯಗಳನ್ನು ತೆರೆಯಲಾಗುವುದು ಎಂದರು.
ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಯಾಗಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಹಂಪಿ, ಗದಗ ಹಾಗೂ ಬೆಳಗಾವಿಯ ಮೃಗಾಲಯಗಳು ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿರುತ್ತವೆ. ಹಂಪಿ, ಗದಗ ಹಾಗೂ ಬೆಳಗಾವಿಯ ಮೃಗಾಲಯಗಳಲ್ಲಿ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಮೈಸೂರು, ಬೆಂಗಳೂರು ಮೃಗಾಲಯಗಳನ್ನೂ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗುñದೆ ¤ ಎಂದು ಮಾಹಿತಿ ಹೇಳಿದರು. 3ನೇ ಅಲೆ ಆರಂಭವಾಗುತ್ತದೆ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಮೃಗಾಲಯಗಳಲ್ಲಿ ಮಕ್ಕಳಿಗಾಗಿ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. ಮೃಗಾಲಯಗಳ ಮುಂದೆಯೇ ಕೊರೊನಾ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅಪಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಮುಂಜಾಗ್ರತಾ ಕ್ರಮ: ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳನ್ನು ನೋಡಿಕೊಳ್ಳುವವರಿಗೆ ಆಗಾಗ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅವರು ವೆಟ್ ಮ್ಯಾಟ್ ಅನ್ನು ದಾಟಿ ಪ್ರಾಣಿಗಳ ಬಳಿ ತೆರಳಬೇಕು. ಜೊತೆಗೆ ಮೃಗಾಲಯಗಳನ್ನು ದಿನಕ್ಕೆ 3 ಬಾರಿ ಸ್ಯಾನಿಟೈಸ್ ಮಾಡುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಜ್ಯೋತಿ ರೇಚಣ್ಣ ಉಪಸ್ಥಿತರಿದ್ದರು.