ಪಂಪ್ಸೆಟ್ಗೆ ತಕ್ಕಂತೆ ಟೀಸಿ ಅಳವಡಿಸಿ
Team Udayavani, Mar 16, 2019, 7:38 AM IST
ಕೆ.ಆರ್.ನಗರ: ರೈತರ ಪಂಪ್ಸೆಟ್ಗಳಿಗೆ ಅವಶ್ಯಕತೆ ಇರುವಷ್ಟು ಟ್ರಾನ್ಸ್ಫಾರ್ಮರ್ ಅಳವಡಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪಟ್ಟಣದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ಸರಗೂರು ನಟರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು, ಒಂದು ಟ್ರಾನ್ಸ್ಫಾರ್ಮರ್ಗೆ 7-8 ಪಂಪ್ಸೆಟ್ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇವುಗಳು ಒತ್ತಡ ತಾಳಲಾರದೆ ಆಗಿಂದಾಗ್ಗೆ ಸುಟ್ಟು ಹೋಗುತ್ತಿವೆ. ಇದರಿಂದ ಸಾಕಷ್ಟು ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ ಎಂದು ಕಿಡಿಕಾರಿದರು.
ಇದೀಗ ಬೇಸಿಗೆ ಕಾಲವಾಗಿರುವುದರಿಂದ ಪಂಪ್ಸೆಟ್ಗಳಿಗೆ ಕನಿಷ್ಠ 10 ಗಂಟೆಗಳ ವಿದ್ಯುತ್ ಪೂರೈಸಬೇಕು. ಐಪಿ ಸೆಟ್ಗೆ ಸೆಸ್ಕ್ನಿಂದ ಆರ್ಆರ್ ನಂಬರ್ ಪಡೆಯಲು ಗುತ್ತಿಗೆದಾರರು ರೈತರಿಂದ ದುಬಾರಿ ಹಣ ಪಡೆಯುತ್ತಿದ್ದಾರೆ. ಹೀಗಾಗಿ ಇಲಾಖೆ ನೇರವಾಗಿ ರೈತರಿಗೆ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಸೆಸ್ಕ್ ಸಹಾಯಕ ಅಭಿಯಂತರ ಅರ್ಕೇಶ್ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಎಂ.ಜೆ.ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಪದಾಧಿಕಾರಿಗಳಾದ ಹೊಂಬಾಳೇಗೌಡ, ಲೋಕೇಶ್, ಎ.ಬಿ.ಬಸಪ್ಪ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.