ಕಿಡಿಗೇಡಿಗಳ ಕಿಚ್ಚಿಗೆ ಭಸ್ಮವಾದ ಇಸಾಕ್ ಗ್ರಂಥಾಲಯದ 11 ಸಾವಿರಕ್ಕೂ ಹೆಚ್ಚು ಪುಸ್ತಕಗಳು
Team Udayavani, Apr 10, 2021, 1:08 PM IST
ಮೈಸೂರು: ರಾಜೀವ್ ನಗರದ ಸೈಯದ್ ಇಸಾಕ್ ನೆರೆಹೊರೆಯವರಿಗೆ ಕನ್ನಡ ಭಾಷೆ ಜೊತೆಗೆ ಜ್ಞಾನದ ದಾಹವನ್ನು ತಣಿಸುವ ಸಲುವಾಗಿ ಸ್ವಂತ ಪರಿಶ್ರಮದಲ್ಲಿ ಕಟ್ಟಿದ್ದ ಗ್ರಂಥಾಲಯ ಕಿಡಿಗೇಡಿಗಳ ಕಿಚ್ಚಿಗೆ ಭಸ್ಮವಾಗಿದೆ. ಶುಕ್ರವಾರ ಮುಂಜಾನೆ ನಡೆದಿರುವ ಈ ಘಟನೆಯಲ್ಲಿ ಗ್ರಂಥಾಲಯದಲ್ಲಿದ್ದ 11 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಭಸ್ಮವಾಗಿವೆ.
ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ಸೈಯದ್ ಕನ್ನಡ ಪ್ರೇಮಿಯಾಗಿದ್ದು, ತನಗೆ ಅಕ್ಷರ ಜ್ಞಾನವಿಲ್ಲದಿದ್ದರೂ, ಇತರರು ಓದಬೇಕು ಹಾಗೂ ಮೈಸೂರಿನಲ್ಲಿ ಕನ್ನಡ ಬಳಕೆ ಕಡಿಮೆ ಇರುವ ಪ್ರದೇಶಗಳಾದ ರಾಜೀವನಗರ ಸುತ್ತಮುತ್ತಕನ್ನಡ ಅರಳಬೇಕೆಂದು 2011ರಿಂದ ಸಣ್ಣ ಗುಡಿಸಲಿನಲ್ಲಿ ಗ್ರಂಥಾಲಯ ಆರಂಭಿಸಿದ್ದರು.
ಇವರ ಆಸಕ್ತಿ ನೋಡಿ ಹಲವಾರು ದಾನಿಗಳು ಸಾವಿರಾರು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದರು. ಇವರ ಗ್ರಂಥಾಲಯ ಸೇವೆ ಮೆಚ್ಚಿ ಹಲವು ಸಂಸ್ಥೆಗಳು ಪ್ರಶಸ್ತಿ ನೀಡಿದ್ದವು. ಭಗವದ್ಗೀತೆ, ಕುರಾನ್ ಮತ್ತು ಬೈಬಲ್ನ ಕನ್ನಡ ಅವತರಣಿಕೆ ಪುಸ್ತಕ ಸೇರಿದಂತೆ ಧರ್ಮಗ್ರಂಥಗಳು ಗ್ರಂಥಾಲಯದಲ್ಲಿ ಹೆಚ್ಚಾಗಿದ್ದವು. ಇದರ ಜೊತೆ ಕುವೆಂಪು ಸೇರಿದಂತೆ ಕನ್ನಡದ ಕಥೆ, ಕಾದಂಬರಿ ಪುಸ್ತಕಗಳ ಸಂಗ್ರಹ ಗ್ರಂಥಾಲಯದಲ್ಲಿದ್ದವು.
ಶುಕ್ರವಾರ ಮುಂಜಾನೆ 3.45ರ ಹೊತ್ತಿಗೆ ಗ್ರಂಥಾಲಯದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಸೈಯದ್ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೆ ಅವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಶೇ.9 ರಷ್ಟು ಪುಸ್ತಕಗಳು ಸುಟ್ಟು ಹೋಗಿದ್ದವು. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಬ್ರರಿಯಲ್ಲಿ 15 ಸಾವಿರ ಪುಸ್ತಕ ಇಟ್ಟಿದ್ದೆ :
ಗ್ರಂಥಾಲಯದಲ್ಲಿ 15 ಸಾವಿರದಷ್ಟು ಪುಸ್ತಕ ಇಟ್ಟಿದ್ದೆ. ಜತೆಗೆ ಕನ್ನಡ ಪತ್ರಿಕೆಗಳನ್ನು ತರಸುತ್ತಿದ್ದೆ,ದಿನಕ್ಕೆ 150ಕ್ಕೂ ಹೆಚ್ಚು ಮಂದಿ ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುತ್ತಿದ್ದರು. ಗ್ರಂಥಾಲಯ ತಾತ್ಕಲಿಕವಾಗಿ ಗುಡಿಸಲಿನಲ್ಲಿದ್ದ ಕಾರಣ ಅಲ್ಲೇ ಮಲಗುತ್ತಿದ್ದೆ.ಗ್ರಂಥಾಲಯಕ್ಕೊಂದು ಸೂರು ದೊರೆತು. ಶಾಶ್ವತ ಆದ ಕಾರಣ ಮನೆಯಲ್ಲೇ ಮಲಗುತ್ತಿರುವುದನ್ನು ಗಮನಿಸಿದ ಕನ್ನಡ ವಿರೋಧಿ ಹಾಗೂ ಕೀಡಿಗೇಡಿಗಳು ಗ್ರಂಥಾಲಯಕ್ಕೆ ಬೆಂಕಿ ಇಟ್ಟು ದಹಿಸಿದ್ದಾರೆ ಎಂದು ಸೈಯದ್ ಆರೋಪಿಸಿದ್ದಾರೆ. ಗ್ರಂಥಾಲಯಕ್ಕೆ ವಿಚಾರಕ್ಕೆ ನನ್ನ ಮೇಲೆ 4 ಬಾರಿ ದಾಳಿ ನಡೆದಿತ್ತು ಎಂದು ಗಂಥಾಲಯ ನಿರ್ಮಾತೃ ಸೈಯದ್ ತಿಳಿಸಿದ್ದಾರೆ.