ಕಾರ್ನಾಡ್ ಕನ್ನಡದ ಅದ್ವಿತೀಯ ಲೇಖಕ
Team Udayavani, Jun 11, 2019, 3:00 AM IST
ಮೈಸೂರು: ಸಾಹಿತಿ, ಖ್ಯಾತ ನಾಟಕಕಾರ ಗಿರೀಶ್ ಕರ್ನಾಡ್ ಅವರು ಕನ್ನಡದ ಅದ್ವಿತೀಯ ಲೇಖಕರಲ್ಲಿ ಒಬ್ಬರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಬಣ್ಣಿಸಿದರು.
ಗುರುತು ಬಳಗ, ಶ್ರೀನಿಧಿ ಪುಸ್ತಕಗಳು ಸಹಯೋಗದಲ್ಲಿ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದ್ದ ಗುರುತು ಬಳಗದ ಮೊದಲನೇ ವರ್ಷದ ವಾರ್ಷಿಕೋತ್ಸವ, ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರಭಾವಿ ನಾಟಕಕಾರರಾಗಿ ಅಲ್ಲದೇ ಸಾಮಾಜಿಕ ಚಿಂತಕರಾಗಿ, ಹೋರಾಟಗಾರರಾಗಿ, ನಟರಾಗಿ, ಸಮಕಾಲೀನ ಸಂವಾದಗಳಿಗೆ ದನಿಯಾಗಿ ನಿಲ್ಲುವ ಮೂಲಕ ಮನೆಮಾತಾಗಿದ್ದರು. ಅವರು ಸಾಹಿತ್ಯ ಕ್ಷೇತ್ರಕಷ್ಟೇ ಸೀಮಿತವಾಗದೇ ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು.
ಅವರ ಚಿಂತನೆ, ಹೋರಾಟ, ಆಲೋಚನೆ ಕ್ರಮಗಳು ಇಂದಿಗೂ ಇದ್ದು, ಅವುಗಳನ್ನು ನಮ್ಮಲ್ಲಿ ತಂದುಕೊಳ್ಳುವ ಮೂಲಕ ಅವರ ವಿಚಾರ ಧಾರೆಗಳು ನಮ್ಮ ಜೊತೆ ಇರುವಂತೆ ಮಾಡಬೇಕು ಎಂದು ಪ್ರೊ. ಅರವಿಂದ ಮಾಲಗತ್ತಿ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಗಿರೀಶ್ ಕರ್ನಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಸಾಹಿತಿ ಬನ್ನೂರು ಕೆ. ರಾಜು, ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರರು ಇದ್ದರು.