ನಿಮ್ಮ ನೋಟಿಸ್ ಗೆ ಧಿಕ್ಕಾರ! ಕೆಪಿಸಿಸಿಗೆ ವಿಶ್ವನಾಥ ಖಡಕ್ ಉತ್ತರ
Team Udayavani, Mar 8, 2017, 1:00 PM IST
ಬೆಂಗಳೂರು:ನಾವೆಂದೂ ಒಳಗೊಂದು, ಹೊರಗೊಂದು ರೀತಿಯಲ್ಲಿ ನಡೆದುಕೊಂಡವರಲ್ಲ. ಕಾಂಗ್ರೆಸ್ ಪಕ್ಷದ ಸರ್ಕಾರದ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದೆ. ಅದನ್ನು ಜನರಿಗೆ, ಕಾರ್ಯಕರ್ತರಿಗೆ ತಿಳಿಸುತ್ತಿದ್ದೇನೆ. ನಾವು ಕಾಂಗ್ರೆಸ್ ನಿಷ್ಠರು, ನಿಮ್ಮ ನೋಟಿಸ್ ಗೆ ಧಿಕ್ಕಾರ!..ಇದು ಮಾಜಿ ಸಂಸದ ಎಚ್.ವಿಶ್ವನಾಥ ಅವರು ಬಹಿರಂಗ ಪತ್ರದ ಮೂಲಕ ಕೆಪಿಸಿಸಿ ನೋಟಿಸ್ ಗೆ ನೀಡಿರುವ ಖಡಕ್ ಉತ್ತರ.
ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ವಿಶ್ವನಾಥ ಅವರಿಗೆ ನೋಟಿಸ್ ನೀಡಿದ್ದರು.
ನಾನು ರಾಹುಲ್ ಗಾಂಧಿಯನ್ನಾಗಲಿ, ಸೋನಿಯಾ ಗಾಂಧಿಯನ್ನಾಗಲಿ ಟೀಕಿಸಿಲ್ಲ. ನಿಮ್ಮ ಆಪಾದನೆ ಕಪೋಲ ಕಲ್ಪಿತ, ಉದ್ದೇಶಿತ ಮತ್ತು ಆಧಾರ ರಹಿತವಾದದ್ದು. ಪಕ್ಷದ ಹಿರಿಯರನ್ನು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದವರನ್ನು ಕರೆದು ಮಾತನಾಡಿಸುವ ಸೌಜನ್ಯವನ್ನೂ ನೀವು ತೋರಿಸಿಲ್ಲ. ಹಾಗಾಗಿ ನಮ್ಮನ್ನು ಪಕ್ಷ ವಿರೋಧಿಗಳೆಂದು ಕರೆಯುವುದು ಎಷ್ಟು ಸರಿ ಎಂದು ವಿಶ್ವನಾಥ ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ನನಗೆ ನೋಟಿಸ್ ನೀಡಲು ಪರಮೇಶ್ವರ್ ಗೆ ಅಧಿಕಾರ ಕೊಟ್ಟವರಾರು? ನಾನು ಯಾರನ್ನು ಟೀಕಿಸುತ್ತಿಲ್ಲ. ಅದು ನಿಮ್ಮ ಭ್ರಮೆ ಎಂದು ಕಿಡಿಕಾರಿದ್ದಾರೆ.