ಕಾವೇರಿ ಕೂಗು ಅಭಿಯಾನಕ್ಕೆ ಚಾಲನೆ
Team Udayavani, Aug 6, 2019, 3:00 AM IST
ಮೈಸೂರು: ಮೈಸೂರಿನ ಅರಮನೆಯ ಬಲರಾಮ ದ್ವಾರದ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾವೇರಿ ಕೂಗು (ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಪೂರ್ವಭಾವಿಯಾಗಿ ಚಾಲನೆ ನೀಡಿದರು.
ಕಾವೇರಿ ಕೂಗು (ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಸೆ.3ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸದ್ಗುರು ಚಾಲನೆ ನೀಡಲಿದ್ದು, ಈಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮನದಟ್ಟು ಮಾಡಲು ಮೈಸೂರು ಭಾಗದಲ್ಲಿ ಜಾಗೃತಿ ಜಾಥಾ ನಡೆಯಿತು. ಒಟ್ಟು ಎಂಟು ವಾಹನಗಳು ನದಿ ಸಂರಕ್ಷಣೆಯ ಉದ್ದೇಶ ಹೊತ್ತು ನಂಜನಗೂಡು ಮಾರ್ಗ ಮೂಲಕ ಚಾಮರಾಜನಗರಕ್ಕೆ ತೆರಳಿದವು.
ವಾಹನಗಳಿಗೆ ಎಲ್ಇಡಿ ಪರದೆ ಅಳವಡಿಸಿ ನದಿಗಳು, ಪರಿಸರ, ಅರಣ್ಯಗಳು ರೈತರಷ್ಟೇ ಅಲ್ಲ, ಸಾಮಾನ್ಯರ ಬದುಕಿಗೆ ಹೇಗೆ ಉಪಯುಕ್ತ ಎಂಬುದನ್ನು ಪ್ರದರ್ಶಿಸಲಾಯಿತು. ಜೊತೆಗೆ ಕಾವೇರಿ ಪರಿಸರ ಹಾಳಾಗುತ್ತಿರುವ ಬಗ್ಗೆ ಹಾಗೂ ಅದರ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಸದ್ಗುರು ಜಗ್ಗಿ ವಾಸುದೇವ ಮಾತಾಡಿರುವ ವಿಡಿಯೋಗಳನ್ನು ತೋರಿಸಲಾಯಿತು.
ಈ ಸಂದರ್ಭ ಮಾತನಾಡಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಈಶಾ ಫೌಂಡೇಷನ್ನವರು ಈ ಅಭಿಯಾನ ಶುರು ಮಾಡಿದ್ದು, ಇದೊಂದು ಉತ್ತಮ ಆಲೋಚನೆ. ಭಾರತದಲ್ಲಿ ನದಿಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಸಹಕಾರಿಯಾಗಲಿದೆ. ಇಂದು ನದಿಗಳ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿಯನ್ನು ಅಭಿಯಾನದುದ್ದಕ್ಕೂ ಸ್ವಯಂ ಸೇವಕರು ರೈತರಿಗೆ ತಿಳಿಸಿಕೊಡಲಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ರೈತರಿಗೆ ನದಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾವೇರಿ ಕಾಲಿಂಗ್ ಅಭಿಯಾನ ಆರಂಭವಾಗಿದೆ. ಅರಣ್ಯ ಕೃಷಿ ಬಗ್ಗೆ ನಮ್ಮ ಪರಿಸರ ಮತ್ತು ನದಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಕಾವೇರಿ ಮಾತೆಯನ್ನು ಇದರಿಂದ ರಕ್ಷಿಸಬಹುದು ಎಂದರು.
ವೈಜ್ಞಾನಿಕ ಬಳಕೆ: ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ವಿಶ್ವ ಮಟ್ಟದಲ್ಲಿ ಇಂದು ಪರಿಸರ ವಿಷಯ ಚರ್ಚೆಯಾಗುತ್ತಿದೆ. ಈ ವೇಳೆ ಜಲ ಮಾಲಿನ್ಯ ಹಾಗೂ ಜಲ ಸಂರಕ್ಷಣೆ ಬಗ್ಗೆ ಈ ಅಭಿಯಾನ ಧ್ವನಿ ಎತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ನೀರಿನ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ನೀರನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಿಕೊಳ್ಳಬೇಕು. ಕಾವೇರಿ ಕಣಿವೆ ಭಾಗದಲ್ಲಿ ಮಾಲಿನ್ಯ ಹೇಗೆ ಉಂಟಾಗುತ್ತಿದೆ. ಇವುಗಳ ಬಗ್ಗೆ ಕಾವೇರಿ ಕಾಲಿಂಗ್ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.
ಕಾವೇರಿ ಮಾತೆ ರಕ್ಷಣೆ ಜತೆಗೆ ಪರಿಸರ ಸಂರಕ್ಷಣೆಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ರೈತರು ಲಾಭದಾಯಕವಾದ ಅರಣ್ಯ ಕೃಷಿ ಮಾಡುವಂತೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ಜಿಕೆವಿಕೆ ಸಂಶೋಧನಾ ನಿವೃತ್ತ ನಿರ್ದೇಶಕ ಮತ್ತು ಒಣ ಭೂಮಿ ಕೃಷಿ ಮುಖ್ಯಸ್ಥ ಡಾ.ಎಂ.ಎ.ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.