ಮಹಿಳಾ ಸಬಲೀಕರಣ ವಾಕಥಾನ್ಗೆ ಚಾಲನೆ
Team Udayavani, Jan 26, 2020, 3:00 AM IST
ಮೈಸೂರು: ಧಾನ್ ಫೌಂಡೇಷನ್ ಮೈಸೂರು ವಲಯ ವತಿಯಿಂದ ಮಹಿಳಾ ಸಬಲೀಕರಣ ಕುರಿತು ವಾಕಥಾನ್-2020 ನಡೆಯಿತು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಶನಿವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ ವಾಕಥಾನ್ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ವಾಕಥಾನ್ ಉದ್ದಕ್ಕೂ ಡೊಳ್ಳು ಕುಣಿತ ಗಮನ ಸೆಳೆಯಿತು. ವಾಕಥಾನ್ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ವೃತ್ತ, ಕೆ.ಆರ್.ವೃತ್ತ, ಅರಸು ರಸ್ತೆ ಹಾಗೂ ಡೀಸಿ ಕಚೇರಿ ಮೂಲಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕೊನೆಗೊಂಡಿತು.
ಧಾನ್ ಸಂಸ್ಥೆಯು ಮೈಸೂರು ವಲಯಕ್ಕೆ ಒಳಪಟ್ಟಂತೆ 1600 ಸ್ವಸಹಾಯ ಗುಂಪುಗಳ 30 ಸಾವಿರ ಮಹಿಳಾ ಸದಸ್ಯರನ್ನು ಹೊಂದಿದ್ದು, ಅವರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಸೌಲಭ್ಯ, ನಾಯಕತ್ವದ ಅವಕಾಶ, ಮಹಿಳೆಯರಿಗೆ ಕೌಶಲ್ಯ ತರಬೇತಿ ಮುಖಾಂತರ ಉದ್ಯೋಗ ಸೃಷ್ಟಿಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನು ಪ್ರೇರೇಪಿಸಿ ಆದಾಯ ಮೂಲಗಳನ್ನು ಸೃಷ್ಟಿ ಮಾಡಿದೆ.
ಪ್ರತಿಯೊಬ್ಬರಿಗೂ ಜೀವನೋಪಾಯಕ್ಕಾಗಿ ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಿದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಮುಖ್ಯ ಉದ್ದೇಶದಿಂದ ಹಾಗೂ ಧಾನ್ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳನ್ನು ಪರಿಚಯಿಸುವ ಉದ್ದೇಶದಿಂದ ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಧಾನ್ ಫೌಂಡೇಷನ್ ಮುಖ್ಯಸ್ಥರು ತಿಳಿಸಿದರು.