ಮಾಘ ಹುಣ್ಣಿಮೆ ಪುಣ್ಯಸ್ನಾನದೊಂದಿಗೆ ಕುಂಭಕ್ಕೆ ತೆರೆ
Team Udayavani, Feb 20, 2019, 7:30 AM IST
ತಿರುಮಕೂಡಲ ಶ್ರೀಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ 3 ದಿನಗಳ ಕಾಲ ನಡೆದ ದಕ್ಷಿಣ ಭಾರತದ 11ನೇ ಮಹಾ ಕುಂಭಮೇಳ ವರ್ಣರಂಜಿತ ಸಂಪನ್ನ ಕಂಡಿತು. ಸಂತರು, ಸ್ವಾಮೀಜಿಗಳು, ಗಣ್ಯರು ಸೇರಿದಂತೆ 3 ಲಕ್ಷಕ್ಕೂ ಅಧಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಗಸ್ತೇಶ್ವರ ಸ್ವಾಮಿ, ಗುಂಜಾ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ಸ್ವಾಮೀಜಿಗಳ ಪುರಪ್ರವೇಶ, ಉತ್ಸವ, ಯಾಗಶಾಲಾ ಪ್ರವೇಶ, ಪೂರ್ಣಾಹುತಿ ಮತ್ತಿತರ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯೊಂದಿಗೆ ನೆರವೇರಿದವು. ಈ ಬಾರಿ ವಾರಾಣಸಿ ಮಾದರಿಯಂತೆ ನದಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ವಿಶೇಷವಾಗಿತ್ತು. “ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ನಾಸ್ತಿಕ ಭಾವಬಿಟ್ಟು ಆಸ್ತಿಕ ಭಾವದಿಂದ ಹೋಗೋಣ ಎಂದು ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮೈಸೂರು: ಮಾಘ ಶುದ್ಧ ವ್ಯಾಸ ಪೂರ್ಣಿಮೆಯಂದು ಮೀನ ಲಗ್ನ ಹಾಗೂ ವೃಷಭ ಲಗ್ನದಲ್ಲಿ ಲಕ್ಷಾಂತರ ಭಕ್ತರ ಪುಣ್ಯಸ್ನಾನದೊಂದಿಗೆ ತಿರುಮಕೂಡಲು ಶ್ರೀಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆದ 11ನೇ ಮಹಾ ಕುಂಭಮೇಳಕ್ಕೆ ಮಂಗಳವಾರ ವರ್ಣರಂಜಿತ ತೆರೆ ಬಿತ್ತು.
ತಿರುಮಕೂಡಲಿನ ಶ್ರೀ ಅಗಸ್ತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯ, ಅಂಕುರಾರ್ಪಣೆಯೊಂದಿಗೆ ಭಾನುವಾರ ಬೆಳಗ್ಗೆ ಮಾಘಮಾಸದ ಪುಣ್ಯಸ್ನಾನಕ್ಕೆ ಚಾಲನೆ ದೊರಕಿತ್ತು. ಸಂಜೆ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಕುಂಭಮೇಳದ ಉದ್ಘಾಟನೆ ನೆರವೇರಿಸಿದ್ದರು. 18ರಂದು ನಡೆದ ಧಾರ್ಮಿಕ ಸಭೆಯನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದ್ದರು.
ಸೋಮವಾರ ಸಂಜೆ ಸ್ವಾಮೀಜಿಗಳ ಪುರಪ್ರವೇಶ ಮತ್ತು ಉತ್ಸವ, ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಯಾಗಶಾಲಾ ಪ್ರವೇಶ ಮತ್ತು ಪೂರ್ಣಾಹುತಿ ನೆರವೇರಿತು. ರಾತ್ರಿ ವಾರಾಣಸಿ ಮಾದರಿಯಂತೆ ನದಿ ಸಂಗಮ ಸ್ಥಳದಲ್ಲಿ ಸಾರ್ವಜನಿಕ ಗಂಗಾಪೂಜೆ ಮತ್ತು ದೀಪಾರತಿ ನೆರವೇರಿಸಲಾಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.
ಮಂಗಳವಾರ ಮಾಘಶುದ್ಧ ವ್ಯಾಸ ಪೂರ್ಣಿಮೆ ಪ್ರಯುಕ್ತ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರದತ್ತ ಹರಿದುಬಂದ ಭಕ್ತರು, ತ್ರಿವೇಣಿ ಸಂಗಮದಲ್ಲಿ ಮಿಂದು, ಅಗಸ್ತೇಶ್ವರ ಸ್ವಾಮಿ ಮತ್ತು ಗುಂಜಾ ನರಸಿಂಹಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಧನ್ಯತೆಯಿಂದ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗಿನಿಂದಲೇ ಪುಣ್ಯಾಹ, ಸಪ್ತನದೀತೀರ್ಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾಯಿತು.
ಮಹೋದಯ ಪುಣ್ಯಸ್ನಾನಕ್ಕೆ ಮೀನಲಗ್ನದಲ್ಲಿ ಬೆಳಗ್ಗೆ 9.35 ರಿಂದ 9.50 ಹಾಗೂ ವೃಷಭ ಲಗ್ನದಲ್ಲಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12ಗಂಟೆವರೆಗೆ ಅಭಿಜಿನ್ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳನ್ನು ನಿಗದಿಪಡಿಸಲಾಗಿತ್ತು. ಈ ಶುಭ ಮುಹೂರ್ತದಲ್ಲಿ ಸ್ವಾಮೀಜಿಗಳು, ಗಣ್ಯರು, ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.
ಯುವಕರ ಸಂಭ್ರಮ: ಕುಂಭಮೇಳಕ್ಕೆ ಬಂದಿದ್ದ ಯುವಕರು ಮಧ್ಯಾಹ್ನದ ಬಿಸಿಲೇರುತ್ತಿದ್ದಂತೆ ನದಿಗೆ ಇಳಿದು ಈಜಾಡಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಎಲ್ಲ ವಯೋಮಾದವರೂ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಭಕ್ತರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಹಾಗೂ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗಿತ್ತು.
ಭಕ್ತರ ಸುರಕ್ಷತೆ ದೃಷ್ಟಿಯಿಂದ ನದಿಯ ವಿವಿಧ ಭಾಗಗಳಲ್ಲಿ ಯೋಧರು ತೆಪ್ಪದಲ್ಲಿ ಕುಳಿತು ಎಚ್ಚರಿಕೆವಹಿಸಿದ್ದರು. ಜೊತೆಗೆ ಅಗ್ನಿಶಾಮಕ ದಳ, ನುರಿತ ಈಜುಗಾರರನ್ನು ನಿಯೋಜಿಸಲಾಗಿತ್ತು. ಕುಂಭಮೇಳಕ್ಕೆ ಬರುವ ಭಕ್ತರಿಗಾಗಿ ಆದಿಚುಂಚನಗಿರಿ ಮಠ ಹಾಗೂ ಸುತ್ತೂರು ಮಠದಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಆಸಕ್ತಿ: ನದಿಯ ಸ್ವತ್ಛತೆಯ ಸಲುವಾಗಿ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ನದಿಗೆ ನೀರು ಬಿಟ್ಟಿದ್ದರಿಂದ ನಡುಗಡ್ಡೆಯ ಮೇಲೆ ನೀರು ನಿಂತು ಭಕ್ತರ ಓಡಾಟಕ್ಕೆ ಕೊಂಚ ಅಡೆತಡೆಯಾಗಿದ್ದು ಬಿಟ್ಟರೆ ಯಾವುದೇ ತೊಂದರೆ ಇಲ್ಲದೆ ಕುಂಭಮೇಳ ಮುಕ್ತಾಯಗೊಂಡಿತು. ಒಟ್ಟಾರೆ ಹಿಂದಿನ ಕುಂಭಮೇಳಗಳಿಗೆ ಹೋಲಿಸಿದರೆ ಈ ಬಾರಿ ಸರ್ಕಾರ ವಿಶೇಷ ಆಸಕ್ತಿವಹಿಸಿ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಟೊಂಕಕಟ್ಟಿ ನಿಂತು ದುಡಿದಿದ್ದರ ಫಲವಾಗಿ 11ನೇ ಕುಂಭಮೇಳದ ಸಿದ್ಧತೆ ಅತ್ಯಂತ ವ್ಯವಸ್ಥಿತವಾಗಿದ್ದರ ಬಗ್ಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.
3 ಲಕ್ಷಕ್ಕೂ ಅಧಿಕ ಭಕ್ತರಿಂದ ಪುಣ್ಯಸ್ನಾನ: ಮೂರು ದಿನಗಳ ಕುಂಭಮೇಳದಲ್ಲಿ ಮೊದಲ ದಿನ ಭಕ್ತರ ಸಂಖ್ಯೆ ಕಡಿಮೆಯಿತ್ತಾದರೂ ಇನ್ನುಳಿದ ಎರಡು ದಿನಗಳು ಭಕ್ತರು ಕಿಕ್ಕಿರಿದು ಸೇರಿದ್ದರು. ಮೂರು ದಿನಗಳಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಕುಂಭಮೇಳಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಿಂದ ಸಂಗಮದ ನಡುಗಡ್ಡೆಯವರೆಗೆ ಸೇನೆಯ ಯೋಧರು ನಿರ್ಮಿಸಿದ್ದ ತಾತ್ಕಾಲಿಕ ತೇಲುವ ಸೇತುವೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಆ ಸೇತುವೆಯ ಮೇಲೆ ಓಡಾಡಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ