ಮಹಾತ್ಮರ ರಸ್ತೆ; ಗುತ್ತಿಗೆದಾರರಿಂದ ಅವ್ಯವಸ್ಥೆ
Team Udayavani, Aug 26, 2017, 4:29 PM IST
ನಂಜನಗೂಡು: ಪಟ್ಟಣದ ರಾಷ್ಟ್ರಪತಿ ರಸ್ತೆ ಹಾಗೂ ಮಹಾತ್ಮಗಾಂಧೀ ರಸ್ತೆಯ ಕಾಮಗಾರಿ ವಿಳಂಬದಿಂದಾಗಿ ಸ್ಥಳೀಯರು ಸಂಕಷ್ಟ ಎದುರಿಸುವಂತಾಗಿದೆ. ಶಾಸಕರು, ಉಸ್ತುವಾರಿ ಸಚಿವರು ಬದಲಾದರೂ ಕೋಟಿ ಕೋಟಿ ಹಣ ಕ್ಷೇತ್ರಕ್ಕೆ ಹರಿದುಬಂದರೂ ಕಾಮಗಾರಿ ವೇಗ ಪಡೆದಿಲ್ಲ. ನಂಜನಗೂಡಿನ 2 ಕಣ್ಣುಗಳಂತಿರುವ 2 ರಸ್ತೆಗಳ ಆಧುನೀಕರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉಪ ಚುನಾವಣೆ ಪೂರ್ವದಲ್ಲೇ ಹಣ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದರು. ಅದರಂತೆ ಕಾಮಗಾರಿ ಚಾಲನೆಗೂ ಹಸಿರು ನಿಶಾನೆ ತೋರಿಸಿ ಕಾಮಗಾರಿ ಪ್ರಾರಂಭಿಸಿದ್ದರು. ಕಾಮಗಾರಿ ಆರಂಭವಾಗಿ 6 ತಿಂಗಳಾದರೂ ಪೂರ್ಣಗೊಂಡಿಲ್ಲ. 1.4 ಕಿ.ಮೀ ಆರ್ಪಿ ರಸ್ತೆಯ ಟೆಂಡರ್ ಮೊತ್ತಕ್ಕೆ 6.36ಕೋಟಿ ರಷ್ಟು ಹೆಚ್ಚಿನ ಬಿಡ್ನಲ್ಲಿ 7.3 ಕೋಟಿಗೆ ಕಾಮಗಾರಿ ಗುತ್ತಿಗೆ ಪಡೆಯಲಾಗಿತ್ತು. ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳಿಸುವ ಹಾಗೆ ಕಾಣಿತ್ತಿಲ್ಲ. ಎಂಜಿಎಸ್ ರಸ್ತೆಯ ಸ್ಥಿತಿಯೂ ಹಾಗೇಯೆ ಇದ್ದು ಟೆಂಡರ್ ಮೊತ್ತ 5.1 ಕೋಟಿ ಇದಕ್ಕೇ ಶೇ12
ರಷ್ಟು ಹೆಚ್ಚಿನ ಬಡ್ಡಿಗೆ (6.53ಕೋಟಿಗೆ) ಟೆಂಡರ್ ಪಡೆಯಲಾಗಿದೆ. ಇನ್ನೂ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಾದ ಅವಧಿ ಮುಗಿದಿದ್ದರೂ ರಸ್ತೆ ಇರಲಿ ಚರಂಡಿ ಕಾಮಗಾರಿಯೇ ಮುಗಿದಿಲ್ಲ. 1.4 ಕಿ.ಮೀ ದೂರದ ರಸ್ತೆಯಲ್ಲಿ ಹತ್ತಾರು ಕಡೆ ಚರಂಡಿ ನೀರು, ಮಲ-ಮೂತ್ರದೊಂದಿಗೆ ರಸ್ತೆಯಲ್ಲೇ ಹರಿಯಲಾರಂಭಿಸಿದೆ .ಆದರೆ ಇತ್ತ ತಲೆ ಹಾಕದ ಗುತ್ತಿಗೆದಾರರು ಮತ್ತೂಂದು ಕಡೆ ಚರಂಡಿ ಅಗೆಯಲು ಪ್ರಾರಂಭಿಸಿದ್ದಾರೆ. ಮುಖ್ಯ ರಸ್ತೆಗೆ ಬಡಾವಣೆ ಉಪರಸ್ತೆಗಳಿಂದ ವಾಹನಗಳು ಪ್ರವೇಶಿಸುವಂತಿಲ್ಲ. ಈ ಕಾಮಗಾರಿ ನಡೆಯುತ್ತಿರುವ ಅವೈಜಾnನಿಕ ರೀತಿ ಗಮನಿಸಿದರೆ ರಾಷ್ಟ್ರಪತಿರಸ್ತೆಯನ್ನು ಸೇರುವ ಎಡಬಲದ ಉಪ ರಸ್ತೆಗಳಿಂದ ವಾಹನಗಳು ಮುಖ್ಯ ರಸ್ತೆಗೆ ಬಡಾವಣೆ ಉಪ ರಸ್ತೆಗಳಿಂದ ವಾಹನಗಳು ಪ್ರವೇಶಿಸುವಂತಿಲ್ಲ. ಉತ್ತರ ನೀಡದ ಇಲಾಖೆಗಳು: ಚರಂಡಿ ಮಾಡಿದವವರು ಉಪ ರಸ್ತೆ ಸೇರುವಲ್ಲಿ ರಸ್ತೆಗಿಂತ 1.5 ಅಡಿ ಎತ್ತರಕ್ಕೆ ಚರಂಡಿ ಗೋಡೆ ನಿರ್ಮಿಸಿರುವುದರಿಂದ ಇತ್ತ ಮುಖ್ಯರಸ್ತೆ ಹಾಗೂ ಉಪ ರಸ್ತೆಗಳಿಂದ ವಾಹನಗಳು ಹತ್ತಿ ಇಳಿಯಲಾಗುತ್ತಿಲ್ಲ. ಬಡಾವಣೆ
21 ಉಪರಸ್ತೆಗಳನ್ನು ನಗರಸಭೆ ಇತ್ತೀಚಿಗೆ ಟಾರ್ ಹಾಕಿ ಅಭಿವೃದ್ಧಿಪಡಿಸಿದ್ದು ಅದಕ್ಕೂ ಈ ಚರಂಡಿ ಗೋಡೆಗೂ ಈಗ ಕನಿಷ್ಠ 1.5 ಅಡಿ ಏರುಪೇರಾಗಿದೆ. ಈ ಕುರಿತು ನಗರಸಭೆಯಲ್ಲಾಗಲಿ, ಲೋಕೋಪಯೋಗಿ ಇಲಾಖೆಯವರಲ್ಲಾಗಲಿ ಉತ್ತರವೇ ಇಲ್ಲವಾಗಿದೆ. ಕಾಮಗಾರಿಯ ವಿವರಗಳೇ ಇಲ್ಲ: ಸರ್ಕಾರದ ಯಾವುದೇ ಕಾಮಗಾರಿ ಆರಂಭವಾದರೂ ಆ ಕಾಮಗಾರಿಗಳ ಪ್ರಾರಂಭ, ಪೂರ್ಣಗೊಳಿಸಬೇಕಾದ ವಿವರ ಹಾಗೂ ಕಾಮಗಾರಿ ಮೊತ್ತ, ಗುತ್ತಿಗೆದಾರ ಹೆಸರುಳ್ಳ ಫಲಕ ಹಾಕಬೇಕು. ಆದರೆ, ಈ ನಿಯಮವನ್ನು ಪಾಲಿಸುತ್ತಿಲ್ಲ.