ಹುಣಸೂರು: ನವಿಲನ್ನು ಅಕ್ರಮವಾಗಿ ಮನೆಯಲ್ಲಿರಿಸಿಕೊಂಡ ವ್ಯಕ್ತಿಯ ಬಂಧನ
Team Udayavani, Jul 12, 2022, 12:37 PM IST
ಹುಣಸೂರು: ರಾಷ್ಟ್ರ ಪಕ್ಷಿ ನವಿಲನ್ನು ಅಕ್ರಮವಾಗಿ ಮನೆಯಲ್ಲಿರಿಸಿಕೊಂಡ ಪ್ರಕರಣದಲ್ಲಿ ವ್ಯಕ್ತಿಯೊರ್ವನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಾಮಗೌಡನಹಳ್ಳಿಯ ಜವರನಾಯಕರ ಪುತ್ರ ಮಂಜು ಬಂಧಿತ ಆರೋಪಿ.
ಈತನ ಮನೆಯಲ್ಲಿ ನವಿಲುಗಳಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮೈಸೂರಿನ ಅರಣ್ಯ ಸಂಚಾರಿ ದಳದ ಎಸ್.ಐ. ಲಕ್ಷ್ಮಿ ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿದ ವೇಳೆ ದೊಡ್ಡ ಗಾತ್ರದ ನವಿಲು ಪತ್ತೆಯಾಯಿತು.
ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ ಪೊಲೀಸರ ತಂಡಕ್ಕೆ ಕೆಲವರು ನವಿಲು ಇಲ್ಲ ಬಂದು ಹೋಗುತ್ತಿದೆ ಎಂದರೆ, ಇನ್ನು ಕೆಲವರು ಮಂಜು ಮನೆಯಲ್ಲಿ ಮತ್ತಷ್ಟು ನವಿಲುಗಳಿತ್ತು ಎಂದಿದ್ದಾರೆ.
ಮಾಹಿತಿಯನ್ನಾಧರಿಸಿ ಆರೋಪಿ ಮನೆಯಲ್ಲಿ ಸಿಕ್ಕ ಭಾರೀ ಗಾತ್ರದ ನವಿಲನ್ನು ವಶಕ್ಕೆ ಪಡೆದು ಆರೋಪಿ ಮಂಜು ವಿರುದ್ದ ವನ್ಯಜೀವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.