ಅಧಿಕಾರಿಗಳ ವಿರುದ್ಧ ಮೇಯರ್ ಗರಂ
Team Udayavani, Nov 24, 2020, 4:01 PM IST
ಮೈಸೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಪೌರ ಕಾರ್ಮಿಕರ ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ಚೆಕ್ ವಿತರಿಸುವಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಮೇಯರ್ ತಸ್ನೀಂ ಅಸಮಾ ಧಾನ ಹೊರ ಹಾಕಿದರು.
ನಗರಪಾಲಿಕೆಯ ನವೀಕೃತ ಕಿರು ಸಭಾಂಗಣದಲ್ಲಿ ಸೋಮವಾರ ಕೋವಿಡ್ನಿಂದ ಮೃತಪಟ್ಟ ಕೋವಿಡ್ ವಾರಿಯರ್ಸ್ ಕುಟುಂಬಕ್ಕೆ ತಲಾ30 ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ವಾರಿಯರ್ಸ್ಗೆ ಪರಿಹಾರದಹಣಸ್ವೀಕಾರಕ್ಕೆಬಂದಿದ್ದ ಕೋವಿಡ್ ವಾರಿಯರ್ಸ್ ಕುಟುಂಬದವರು ತುಂಬಾ ಹೊತ್ತು ಕಾದು ಸುಸ್ತಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಜೊತೆಗೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮವನ್ನೇ ವಿಳಂಬ ಮಾಡಿದ್ದಾರೆ. ಕಾರ್ಯಕ್ರಮ ತಡವಾಗಲು ಅಧಿಕಾರಿಗಳೇ ನೇರ ಕಾರಣ. ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರೂ ಕಾರ್ಯಕ್ರಮದ ಮಾಹಿತಿ ನೀಡಿಲ್ಲ ಎಂದು ಕಿಡಿಕಾರಿದರು.
ಪಾಲಿಕೆಯ ಕಾಯಂ ನೌಕರರಾದ ಮಹದೇವ, ಎಸ್.ಜೆ. ಕೃಷ್ಣಮ್ಮ, ವಿ. ಬನ್ನಾರಿ, ಹೊರಗುತ್ತಿಗೆ ನೌಕರರಾದ ಓಬಮ್ಮ ಹಾಗೂ ವಾಹನ ಚಾಲಕ ಶಶಿಕುಮಾರ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಈ ಹಿನ್ನೆಲೆ ಸರ್ಕಾರದ ಆದೇಶದಂತೆ ಮೃತ ಕುಟುಂಬ ಸದಸ್ಯರಿಗೆ 30 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಪ ಮೇಯರ್ ಸಿ.ರಮೇಶ್, ಆಯುಕ್ತ ಗುರುದತ್ ಹೆಗಡೆ, ಸದಸ್ಯರಾದ ಪ್ರೇಮಾ ಶಂಕರೇಗೌಡ, ಗೋಪಿ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನನಗೆ ಮೂರನೇಬಾರಿಗೆ ಅವಮಾನ: ಮೇಯರ್ : ಮೈಸೂರು ನಗರ ಪಾಲಿಕೆಯಲ್ಲಿ ಮೂರನೇ ಬಾರಿಗೆ ನನಗೆ ಅವಮಾನವಾಗಿದೆ.ಕಾರ್ಯ ಕ್ರಮದ ಕುರಿತು ನನಗೆ ಶಿಷ್ಟಾಚಾರದಂತೆ ಆಹ್ವಾನ ನೀಡದೇ,ಕಂಟ್ರೋಲ್ ರೂಂನಿಂದ ಮಾಹಿತಿ ಬರುತ್ತದೆ. ಇನ್ನು ಮುಂದೆ ಇಂತಹ ಅವಮಾನ ಸಹಿಸುವುದಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿ ಗಳ ವಿರುದ್ಧಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಮೇಯರ್ ತಸ್ನೀಂ ಎಚ್ಚರಿಕೆ ನೀಡಿದರು.