ಶಿಥಿಲ ತಾಪಂ ಕಟ್ಟಡದಲ್ಲೇ ಸಭೆ, ಸಮಾರಂಭ!
Team Udayavani, Dec 6, 2019, 4:49 PM IST
ಎಚ್.ಡಿ.ಕೋಟೆ: ಇಡೀ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಹೊಣೆ ಹೊತ್ತಿರುವ ತಾಲೂಕು ಕೇಂದ್ರ ಸ್ಥಾನದ ತಾಲೂಕು ಪಂಚಾಯಿತಿ ಕಚೇರಿಗೆ ಸೇರಿದ ಸಭಾಂಗಣ ಶಿಥಿಲಗೊಂಡು ಅಪಾಯಕ್ಕೆ ಅಹ್ವಾನ ನೀಡುತ್ತಿದೆ. ಆದರೂ ತಾಲೂಕು ಪಂಚಾಯಿತಿ ಆಡಳಿತ ಶಿಥಿಲಗೊಂಡಿರುವ ಕಟ್ಟಡ ನೆಲಸಮಗೊಳಿಸಲು ಮುಂದಾಗಿಲ್ಲ.
ಕಳೆದ ಒಂದೂವರೆ ವರ್ಷಗಳ ಹಿಂದೆ ಆಗಿನ ಸಂಸದ ಆರ್. ಧ್ರುವನಾರಾಯಣ ಅವರು ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ “ಶಿಥಿಲಾವಸ್ಥೆ ತಲ ಪಿರುವ ಕಟ್ಟಡದಿಂದ ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಕಟ್ಟಡದ ದುರಸ್ತಿಗೆ ಕ್ರಮ ಕೈ ಗೊಳ್ಳುವಂತೆ ಸ್ಥಳದಲ್ಲೇ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅದರಂತೆಯೇ ಕಳೆದ ಒಂದು ವರ್ಷದ ಹಿಂದೆ 1.98 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಸಭಾಂಗಣದ ನಿರ್ಮಾಣದ ಕಟ್ಟಡದ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಕಳೆದ ತಿಂಗಳ ಹಿಂದೆ ತಾಲೂಕಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೂಮಿಪೂಜೆ ನೆರವೇರಿಸಿ, ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದರು.
ಆದರೆ, ಕಾಮಗಾರಿ ಇಂದಿಗೂ ಆರಂಭಗೊಂಡಿಲ್ಲ. ಭೂಮಿ ಪೂಜೆ ಸಲ್ಲಿಸಿ ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಿರುವ ಸಭಾಂಗಣದ ಗೋಡೆಗಳು ಸೇರಿದಂತೆ ಮೇಲ್ಛಾವಣಿ ತೀರ ಶಿಥಿಲಗೊಂಡು ಯಾವಾಗ ಕುಸಿದು ಬೀಳುವುದೋ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಕೂಡ ಇದೇ ಸಭಾಂಗಣದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಸಭೆ ನಡೆಯುವಾಗ ಆಕಸ್ಮಿಕವಾಗಿ ಕಟ್ಟಡ ಕುಸಿದು ಬಿದ್ದರೆ ಭಾರೀ ಅನಾಹುತ ತಪ್ಪಿದ್ದಲ್ಲ. ಇದಕ್ಕೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ತಾಲೂಕು ಪಂಚಾಯಿತಿ ಸಭಾಂಗಣ ತೀರ ಶಿಥಿಲಗೊಂಡಿದೆ. ಕಟ್ಟಡಕ್ಕೆ ತೆರಳಲು ಸಾರ್ವಜನಿಕರು ಭಯ ಪಡುವಂತಾಗಿದೆ.
ಆದರೂ ಕೂಡ ವಿವಿಧ ಸಭೆ, ಸಮಾರಂಭಗಳನ್ನು ಶಿಥಿಲಾವಸ್ಥೆಯಲ್ಲಿರುವ ಸಭಾಂಗಣದಲ್ಲಿಯೇ ನಡೆಸಲಾಗುತ್ತಿದೆ. ಸಭಾಂ ಗಣದ ಮೇಲ್ಛಾವಣಿ ಸ್ಥಿತಿ ನೋಡಿದರೆ ಕಬ್ಬಿಣದ ರಾಡುಗಳು ಹೊರ ಬಂದಿರುವುದು ಕಾಣುತ್ತದೆ ಎಂದು ಸ್ಥಳೀಯ ನಿವಾಸಿ ಸೋಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವಘಡ ಸಂಭವಿಸಿ ಪ್ರಾಣಹಾನಿಯಾಗುವ ಮುನ್ನ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲಾ ವಸ್ಥೆಯ ಸಭಾಂಗಣದ ನೆಲ ಸಮಗೊಳಿಸಿ, ಕೂಡಲೇ ಕಾಮಗಾರಿ ಆರಂಭಿಸ ಬೇಕಿದೆ. ಇದೇ ನಿರ್ಲಕ್ಷ್ಯ ಧೋರಣೆ ಮುಂದು ವರಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ.
-ಎಚ್.ಬಿ.ಬಸವರಾಜು