ಪರಿಹಾರ ನಿಧಿಗೆ ಸದಸ್ಯರು ಹಣ ಪಾವತಿ
Team Udayavani, Apr 8, 2020, 2:47 PM IST
ಕೆ.ಆರ್.ನಗರ: ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಬಿಜೆಪಿ ಬೂತ್ ಮಟ್ಟದ ಸದಸ್ಯರು ಹಣ ನೀಡುತ್ತಿದ್ದಾರೆ ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಸ್.ಡಿ. ಮಹೇಂದ್ರ ಹೇಳಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ತಾಲೂಕು ಬಿಜೆಪಿಯಿಂದ ರೋಗಿಗಳಿಗೆ ಆಹಾರ ವಿತರಿಸಿ ಮಾತನಾಡಿ, ತಾಲೂಕಿನ ಪ್ರತಿಯೊಬ್ಬರಿಗೂ ಪಕ್ಷದ ವತಿಯಿಂದ ದಾನಿಗಳ ಸಹಕಾರ ಪಡೆದು ಮಾಸ್ಕ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಕೋವಿಡ್ 19 ತಡೆಗೆ ಸರ್ಕಾರಗಳ ಜತೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸೋಂಕಿತರ ಸೇವೆ ಮಾಡುತ್ತಿರುವ ವೈದ್ಯರು. ಪೊಲೀಸರು ಹಾಗೂ ಮಾಧ್ಯಮದ ಸ್ನೇಹಿತರು ಅಭಿನಂದನೆಗೆ ಅರ್ಹರಾಗಿದ್ದು, ಅವರ ಸಾಮಾಜಿಕ ಕಳಕಳಿಯನ್ನು ಎಲ್ಲರೂ ಮೆಚ್ಚಬೇಕು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ 19 ತಡೆಗೆ ಸಮಾರೋಪಾದಿಯಲ್ಲಿ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಏ.14ರವರೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ.ಮಂಜು, ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಯ ಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶ್ವೇತಾ ಗೋಪಾಲ್, ವಕ್ತಾರ ಶ್ರೀನಿವಾಸಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ದ್ರಾಕ್ಷಾಯಿಣಿ, ಕಗ್ಗುಂಡಿ ಕುಮಾರ್, ಪ್ರತಾಪ್ , ಉಮಾ ಶಂಕರ್, ಪುಟ್ಟಸ್ವಾಮಿ ಹಾಗೂ ಇತರರಿದ್ದರು.