ದೇವಸ್ಥಾನ ನೆಲಸಮ ವಿಚಾರದ ಬಗ್ಗೆ ಎರಡು ದಿನದಲ್ಲಿ ತೀರ್ಮಾನ: ಸಚಿವ ಸೋಮಶೇಖರ್
Team Udayavani, Sep 16, 2021, 10:45 AM IST
ಮೈಸೂರು: ದೇವಾಲಯಗಳ ನೆಲಸಮ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಅದರ ಸಾಧಕ ಬಾಧಕಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಸದ್ಯಕ್ಕೆ ದೇವಾಲಯ ನೆಲಸಮ ವಿಚಾರಕ್ಕೆ ಸಿಎಂ ತಾತ್ಕಾಲಿಕ ತಡೆ ನೀಡಿದ್ದಾರೆ. ಎರಡು ದಿನಗಳಲ್ಲಿ ಈ ವಿಚಾರ ತೀರ್ಮಾನ ಆಗಲಿದೆ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಹುಚ್ಚಗಣಿ ದೇಗುಲ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಇದು ಸಿಎಂ ಹಾಗೂ ಕಂದಾಯ ಸಚಿವರ ಗಮನಕ್ಕೆ ಬಂದಿದೆ. ಜಿಲ್ಲಾಡಳಿತಕ್ಕೆ ಸರ್ಕಾರ ನೊಟೀಸ್ ನೀಡಿದೆ. ನೊಟೀಸ್ ಗೆ ಉತ್ತರ ಬಂದ ಬಳಿಕ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ವಿಚಾರವನ್ನು ಸಿಎಂ ನಿರ್ಧರಿಸುತ್ತಾರೆ ಎಂದರು.
ಇದನ್ನೂ ಓದಿ:ಮೈಸೂರು ದಸರಾಗೆ ಸಿದ್ದತೆ: ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ
ದೇಗುಲ ನೆಲಸಮ ವಿರೋಧಿಸಿ ಹಿಂದೂ ಪರ ಸಂಘಟನೆಗಳಿಂದ ಎಲ್ಲಾ ಕಡೆ ಪ್ರತಿಭಟನೆ, ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸೋಮಶೇಖರ್, ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಪೊಲೀಸರು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದಾರೆ. ಈ ಬೆಳವಣಿಗೆಗಳಿಂದ ಸರ್ಕಾರಕ್ಕೆ ಮುಜುಗರ ಉಂಟಾಗುವ ಪ್ರಶ್ನೆಯೇ ಬರಲ್ಲ. ಎರಡು ದಿನಗಳಲ್ಲಿ ಎಲ್ಲವೂ ಸುಖಾಂತ್ಯ ಆಗಲಿದೆ ಎಂದರು.