ನಾಪತ್ತೆಯಾಗಿದ್ದ ಗೃಹಿಣಿ ಪ್ರಿಯಕರನೊಂದಿಗೆ ಪತ್ತೆ; ಪತಿ ಆತ್ಮಹತ್ಯೆಗೆ ಶರಣು
ವ್ಯಾಟ್ಸಪ್ನಲ್ಲಿ ಬಂದ ಫೋಟೋ ಕಂಡು ಮನನೊಂದ ಪತಿ; ಇಬ್ಬರು ಹೆಣ್ಣು ಮಕ್ಕಳು ಅನಾಥ
Team Udayavani, Oct 31, 2022, 8:18 PM IST
ಸುರೇಶ್ಕುಮಾರ್
ಹುಣಸೂರು : ಪತ್ನಿ ಮನೆಬಿಟ್ಟು ಹೋಗಿ ಪ್ರಿಯರಕನೊಂದಿಗೆ ಮದುವೆಯಾಗಿರುವ ವಿಷಯ ತಿಳಿದು ಮನನೊಂದ ವ್ಯಕ್ತಿಯೊಬ್ಬ ಅತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಯಮುತ್ತೂರು ಕಾಲೊನಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಇವರ ಇಬ್ಬರು ಹೆಣ್ಣು ಮಕ್ಕಳು ಅನಾಥವಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊಯಮುತ್ತೂರು ಕಾಲೋನಿಯ ಕೃಷ್ಣೆಗೌಡರ ಪುತ್ರ ಸುರೇಶ್ಕುಮಾರ್(37) ಎಂಬಾತನೆ ನೇಣಿಗೆ ಶರಣಾಗಿರುವ ನತದೃಷ್ಟ, ಇವರಿಗೆ ತಂದೆ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳಿದ್ದಾರೆ.
ಮೃತ ಸುರೇಶ್ಕುಮಾರ್-ನೇತ್ರಾ ದಂಪತಿಗೆ 7 ಮತ್ತು 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು, ಸುರೇಶ್ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದರೆ. ಪತ್ನಿ ನೇತ್ರ ಹುಣಸೂರಿಗೆ ಸಮೀಪದ ಕಟ್ಟೆಮಳಲವಾಡಿಯ ಮಾರೀಸ್ ಸ್ಪೀನರ್ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು.
ಕೆಲಸಕ್ಕೆ ಹೋಗಿದ್ದಾಕೆ ನಾಪತ್ತೆ
ಕಳೆದ ಒಂದು ತಿಂಗಳ ಹಿಂದೆ ಪತ್ನಿ ನೇತ್ರ ಫ್ಯಾಕ್ಟರಿಗೆ ಹೋಗಿ ಮನೆಗೆ ವಾಪಸ್ ಬರದಿದ್ದರಿಂದ ಸಂಬಂಧಿಕರು, ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಿದರೂ ಪತ್ನಿ ನೇತ್ರಾಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಸುರೇಶ್ ಕುಮಾರ್ ತನ್ನ ಪತ್ನಿ ನೇತ್ರಾಳನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದರು.
ಶಿವಮೊಗ್ಗದಲ್ಲಿ ಪತ್ತೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೇತ್ರಳ ಮೊಬೈಲ್ ಲೊಕೇಶನ್ ಸರ್ಚ್ನಲ್ಲಿದ್ದ ವೇಳೆ ನಾಪತ್ತೆಯಾಗಿದ್ದ ನೇತ್ರಾ ಶಿವಮೊಗ್ಗದಲ್ಲಿ ಪತ್ತೆಯಾಗಿ ಅಲ್ಲಿನ ಪೋಲಿಸರು ಠಾಣೆಗೆ ಕರೆಯಿಸಿ ವಿಚಾರಿಸಿದ ವೇಳೆ ತನಗೆ ಗಂಡನೊಂದಿಗೆ ಬಾಳಲು ಇಷ್ಟ ಇಲ್ಲ. ಅವರು ನನ್ನೊಂದಿಗೆ ಹೊಂದಿಕೊಳ್ಳುವುದಿಲ್ಲ, ಹೀಗಾಗಿ ತಾನು ನನ್ನ ಜೊತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ದೂರು ಗ್ರಾಮದ ಪ್ರಿಯಕರನೊಂದಿಗೆ ಶಿವಮೊಗ್ಗಕ್ಕೆ ಬಂದು 15 ದಿನಗಳ ಹಿಂದೆ ತಾವಿಬ್ಬರೂ ಸೊರಬ ತಾಲೂಕಿನ ದೇವಸ್ಥಾನದಲ್ಲಿ ಹೊಳೆಜೋಳದಗುಡ್ದ ಗ್ರಾಮದ ಗೋಮಂತೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಳು.
ಪ್ರಾಣಕ್ಕೆ ಕುತ್ತು
ಇಬ್ಬರೂ ಮದುವೆಯಾಗಿದ್ದ ಪೋಟೋವನ್ನು ನೇತ್ರಾ ತನ್ನ ಗಂಡನಿಗೆ ವ್ಯಾಟ್ಸಪ್ನಲ್ಲಿ ಕಳುಹಿಸಿ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ತಾವು ಮತ್ತೆ ಬರುವುದಿಲ್ಲವೆಂದು ತಿಳಿಸಿದ್ದಳು. ಇದರಿಂದ ಮನನೊಂದಿದ್ದ ಸುರೇಶ್ಕುಮಾರ್ ಭಾನುವಾರ ಮದ್ಯಾಹ್ನ ತನ್ನ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ನನ್ನ ಮಗನ ಸಾವಿಗೆ ಆತನ ಸೊಸೆ ನೇತ್ರಾಳೇ ಕಾರಣವಾಗಿದ್ದು, ಆಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಇದೀಗ ಸುರೇಶ್ ಕುಮಾರ್ ತಂದೆ ಕೃಷ್ಣೆಗೌಡ ಗ್ರಾಮಾಂತರ ಠಾಣೆ ಪೋಲಿಸರಿಗೆ ದೂರು ನೀಡಿದ್ದಾರೆ.
ಗ್ರಾಮಾಂತರ ಪೋಲಿಸ್ ಇನ್ಸ್ಪೆಕ್ಟರ್ ಸಿ.ವಿ.ರವಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮೃತದೆಹವನ್ನು ಮರಣೋತ್ತರ ಪರೀಕ್ಷೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ್ದು, ವೃದ್ದ ಕೃಷ್ಣೇಗೌಡ ಗ್ರಾಮಸ್ಥರ ಸಹಕಾರದಿಂದ ಮಗನ ಅಂತ್ಯ ಕ್ರಿಯೆ ನಡೆಸಿದ್ದಾರೆ.
ಅನಾಥವಾದ ಮಕ್ಕಳು
ಇತ್ತ ಹೆತ್ತ ತಾಯಿ ತನ್ನ ಕರುಳ ಬಳ್ಳಿಗಳನ್ನೇ ಬಿಟ್ಟು ಪ್ರಿಯಕರನೊಂದಿಗೆ ಮದುವೆ ಮಾಡಿಕೊಂಡು ಶಿವಮೊಗ್ಗದಲ್ಲಿದ್ದರೆ, ಆಸರೆಯಾಗಬೇಕಿದ್ದ ತಂದೆ ಸುರೇಶ್ಕುಮಾರ್ ಸಹ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದರಿಂದಾಗಿ ಪ್ರಪಂಚದ ಜ್ಞಾನವಿಲ್ಲದ ಪುಟ್ಟ ಹೆಣ್ಣುಮಕ್ಕಳನ್ನು ಇದೀಗ ತಾತ ಕೃಷ್ಣೇಗೌಡ ಸಲಹುವ ಜವಾಬ್ದಾರಿ ಹೊರಬೇಕಿದೆ.