ಲಸಿಕೆ ಕೊರತೆಗೆ ಕಾಣದ ಕೈಗಳ ಕೈವಾಡ ಶಾಸಕ ಮಂಜುನಾಥ್ ಆರೋಪ
Team Udayavani, Jul 14, 2021, 9:47 AM IST
ಹುಣಸೂರು:ತಾಲೂಕಿಗೆ ಅಗತ್ಯ ವಿರುವಷ್ಟು ಲಸಿಕೆ ವಿತರಣೆಗೆ ಸರಕಾರ ಮುಂದಾಗದಿರುವ ಬಗ್ಗೆ ಶಾಸಕ ಎಚ್.ಪಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿ, ದೂರವಾಣಿ ಮೂಲಕ ಲಸಿಕೆ ಸರಬರಾಜಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕಿನಲ್ಲಿ ಲಸಿಕೆ ಕೊರತೆ ಎದುರಾಗಿರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದು ಮಾತನಾಡಿದ ಶಾಸಕರು ತಾಲೂಕಿನಲ್ಲಿ ಮೊದಲ ಮತ್ತು ಎರಡನೇ ಹಂತದ ಕೊರೊನಾ ಲಸಿಕೆ ಪಡೆಯುವವರ ಸಂಖ್ಯೆ ಸಾಕಷ್ಟಿದ್ದು, ಇನ್ನೂ 3 ಲಕ್ಷದಷ್ಟು ಲಸಿಕೆ ಬೇಕಿದ್ದು, ಸರಕಾರ ಸಹ ದಿನಕ್ಕೊಂದು ಆದೇಶ ಹೊರಡಿಸುತ್ತಿರುವುದರಿಂದ ಗೊಂದಲವೂ ಇದೆ, ಜೊತೆಗೆ ಲಸಿಕಾ ಸರಬರಾಜಿನಲ್ಲಿ ಕಾಣದ ಕೈಗಳ ಕೈವಾಡ ಕಾಣುತ್ತಿದ್ದು, ಲಸಿಕೆ ವಿತರಣೆಗೆ ಅಗತ್ಯ ಕ್ರಮವಹಿಸಬೇಕು. ಇನ್ನೂ ಸಾಕಷ್ಟು ಮಂದಿ ಸಹ ಕಾಲೇಜು ವಿದ್ಯಾರ್ಥಿಗಳು, ವೃದ್ದರು ಲಸಿಕೆ ಪಡೆದಿಲ್ಲ, ಎಲ್ಲಾ ಹಾಡಿ ಮಂದಿಗೂ ನೀಡಿಲ್ಲ ಹೀಗಿರುವಾಗಲೇ ಲಸಿಕೆ ಕೊರತೆ ಎದ್ದು ಕಾಣುತ್ತಿದೆ, ನಿತ್ಯ ನಗರಕ್ಕೆ ಜನರು ಎಡತಾಕುತ್ತಿದ್ದಾರೆ. ಸರಕಾರವೇ ಮುತುವರ್ಜಿವಹಿಸಿ ಪೊಲಿಯೋ ಲಸಿಕೆ ಮಾದರಿಯಲ್ಲಿ ಎಲ್ಲರಿಗೂ ಆಯಾ ಗ್ರಾಮಗಳಲ್ಲೇ ಲಸಿಕೆ ವಿತರಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲಾ ತಾಲೂಕಿಗೂ ಸರಿಸಮನಾಗಿ ವಿತರಣೆಗೆ ಕ್ರಮವಹಿಸಬೇಕೆಂದು ಮನವಿ ಮಾಡಿರುವುದಾಗಿ ಉದಯವಾಣಿಗೆ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಸಭೆಯಲ್ಲಿ ಪೌರಾಯುಕ್ತ ರಮೇಶ್, ತಹಸೀಲ್ದಾರ್ ಬಸವರಾಜು, ಇಓ ಗಿರೀಶ್, ಟಿ.ಎಚ್.ಓ.ಡಾ. ಕೀರ್ತಿಕುಮಾರ್, ಸಮಾಜಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಬಿಇಓ ನಾಗರಾಜ್ ಮತ್ತಿತರರು ಇದ್ದರು.