ಮೂಲ ಬಾಡಿಗೆದಾರರ ಹೆಸರಿನಲ್ಲಿ ವಸೂಲಿ ದಂಧೆ
ಮಾರುಕಟ್ಟೆಯ ಎಲ್ಲಾ ಸಂಗತಿ ತಿಳಿದ ಅಧಿಕಾರಿಗಳಿಂದ ಜಾಣ ಕುರುಡು ಪ್ರದರ್ಶನ • ಪಾಲಿಕೆಗೆ ಕೋಟ್ಯಂತರ ರೂ.ನಷ್ಟ
Team Udayavani, Aug 26, 2019, 3:17 PM IST
ಮೈಸೂರು: ನಗರದ ಆಯಕಟ್ಟಿನ ಸ್ಥಳದಲ್ಲಿರುವ ದೇವರಾಜ ಮಾರುಕಟ್ಟೆ ವಾಣಿಜ್ಯ ಚಟುವಟಿಕೆಗಳ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ಸಹಜ ವಾಗಿ ಅಲ್ಲಿನ ಮಳಿಗೆಗಳ ಬಾಡಿಗೆ ದರ ದುಬಾರಿ ಎಂಬುದು ಜನಸಾಮಾನ್ಯರ ಊಹೆ. ಆದರೆ ಈ ಊಹೆ ಖಂಡಿತವಾಗಿಯೂ ಸುಳ್ಳು.
ಕಳೆದ 70-80 ವರ್ಷಗಳಿಂದ ದೇವರಾಜ ಮಾರು ಕಟ್ಟೆಯಲ್ಲಿ ಮಳಿಗೆ ಬಾಡಿಗೆ ಪಡೆದು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು, ಮೈಸೂರು ನಗರ ಪಾಲಿಕೆಗೆ ಕಟ್ಟುತ್ತಿರುವ ಬಾಡಿಗೆಯನ್ನೊಮ್ಮೆ ತಿಳಿದರೆ ಮೂರ್ಛೆ ಹೋಗುವುದು ಖಂಡಿತ. ಹೌದು, 40, 75, 180, 240, 350 ಹೀಗೆ ಒಂದೊಂದು ಮಳಿಗೆಗಳು ಪಾಲಿಕೆಗೆ ಕೊಡುತ್ತಿರುವ ಬಾಡಿಗೆ. ತರಕಾರಿ, ದಿನಸಿ ಪದಾರ್ಥಗಳ ಬೆಲೆಯಂತಿರುವ ಈ ಬಾಡಿಗೆ, ಕಳೆದ 16 ವರ್ಷಗಳಿಂದ ನಗರಪಾಲಿಕೆಗೆ ಸಂದಾಯವಾಗು ತ್ತಿದೆ ಎಂಬುದು ಅಚ್ಚರಿ ಎನಿಸಿದರೂ ಸತ್ಯ.
ಕೋಟ್ಯಂತರ ರೂ.ಖರ್ಚು: ಮಾರುಕಟ್ಟೆ ಅಕ್ಕಪಕ್ಕದ ಸಯ್ನಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ, ಶಿವರಾಮಪೇಟೆ ಮುಖ್ಯ ರಸ್ತೆ, ಧನ್ವಂತರಿ ರಸ್ತೆ ಬದಿ ಯಲ್ಲಿರುವ ಮಳಿಗೆಗಳ ಬಾಡಿಗೆ ಹುಬ್ಬೇರಿಸುವಷ್ಟರ ಮಟ್ಟಿಗೆ ದುಬಾರಿಯಾಗಿದೆ. ಇಲ್ಲಿ ಚದರ ಅಡಿ ಅಳತೆ ಲೆಕ್ಕದಲ್ಲಿ ಮಳಿಗೆಗಳ ಬಾಡಿಗೆ ನಿಗದಿ ಮಾಡಲಾಗಿದೆ. ಕಡಿಮೆ ಎಂದರೂ 10 ಸಾವಿರ ರೂ. ಮೇಲೆ ಮಳಿಗೆಗಳು ಬಾಡಿಗೆಗೆ ದೊರೆಯುತ್ತವೆ. ಮುಖ್ಯ ರಸ್ತೆ ಬದಿಯಲ್ಲಿರುವ ಖಾಸಗಿ ಮಳಿಗೆಗಳ ಬಾಡಿಗೆ 20 ಸಾವಿರದಿಂದ 1 ಲಕ್ಷದ ವರೆಗೂ ಇದೆ. ಆದರೆ, ದೇವರಾಜ ಮಾರುಕಟ್ಟೆಯಲ್ಲಿರುವ ಮಳಿಗೆಗಳ ಬಾಡಿಗೆ ಇದಕ್ಕೆ ತದ್ವಿರುದ್ಧ. ಈ ಕಡಿಮೆ ಬಾಡಿಗೆಯಿಂದ ಪಾಲಿಕೆಗೆ ಕೋಟ್ಯಂತರ ರೂ. ಹಣ ನಷ್ಟವಾಗುತ್ತಿರು ವುದು ಎಷ್ಟು ಸತ್ಯವೋ, ಮಾರುಕಟ್ಟೆ ನಿರ್ವಹಣೆಗೂ ಕೋಟ್ಯಂತರ ಹಣ ಖರ್ಚಾಗುತ್ತಿರುವುದು ಅಷ್ಟೇ ಅಚ್ಚರಿ ವಿಷಯ.
ಮಾರುಕಟ್ಟೆಯಲ್ಲಿ ಒಟ್ಟು 728 ಮಳಿಗೆಗಳಿದ್ದು, 8×8, 6×4, 10×4, 8×14, 12×18, 20×30 ಸೇರಿ ವಿವಿಧ ಅಳತೆಯ ಮಳಿಗೆಗಳ ಗುಚ್ಛವಿದೆ. ಇಲ್ಲಿಯ ಪ್ರತಿ ಮಳಿಗೆಗಳಿಗೂ ಪ್ರತ್ಯೇಕ ದರ ನಿಗದಿ ಮಾಡ ಲಾಗಿದೆ. ಸಯ್ನಾಜಿರಾವ್ ರಸ್ತೆಗೆ ಹೊಂದಿಕೊಂಡಂತಿ ರುವ ಮಳಿಗೆಗಳಿಗೂ ಕಡಿಮೆ ದರವಿದೆ. ಈ ರಸ್ತೆಯ ಮತ್ತೂಂದು ಬದಿಯ (ಮಾರುಕಟ್ಟೆ ಎದುರು) ಖಾಸಗಿ ಕಾಂಪ್ಲೆಕ್ಸ್ನಲ್ಲಿರುವ ಮಳಿಗೆಗಳಿಗೆ ಅದಕ್ಕಿಂತ ಹತ್ತು ಪಟ್ಟು ಹೆಚ್ಚಿದೆ.
14 ಸಾವಿರವೇ ಹೆಚ್ಚು: ಮಾರುಕಟ್ಟೆ ಮಳಿಗೆಗಳ ಪೈಕಿ ಅತಿ ಹೆಚ್ಚು ಬಾಡಿಗೆ ದರವನ್ನು ಸಯ್ನಾಜಿರಾವ್ ರಸ್ತೆ ಬದಿಯ ಗುರುಸ್ವೀಟ್ಸ್ ಮಳಿಗೆ 8 ಸಾವಿರ ಬಾಡಿಗೆ ಪಾವತಿಸಿದರೆ, ಅದೇ ಸಾಲಿನ ಮತ್ತೂಂದು ಮೂಲೆ ಯಲ್ಲಿರುವ ಬಾಟಾ ಶೋರೂಂ ಮಳಿಗೆ 14 ಸಾವಿರ ಬಾಡಿಗೆ ಪಾವತಿಸುತ್ತಿದೆ. ಮಿಕ್ಕೆಲ್ಲಾ ಮಳಿಗೆಗಳ ಬಾಡಿಗೆ 8 ಸಾವಿರಕ್ಕಿಂತ ಕಡಿಮೆ ಇದೆ. ಈ ಕಾರಣಕ್ಕಾಗಿ ಇಲ್ಲಿ ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ಸಾಕಷ್ಟು ಪೈಪೋಟಿಯೂ ಇದೆ. ಆದರೆ ಇದಕ್ಕೆ ಅವಕಾಶ ಸಿಗುತ್ತಿಲ್ಲ.
ಕಳೆದ 16 ವರ್ಷಗಳಿಂದ ಮಳಿಗೆಗಳ ಬಾಡಿಗೆ ಪರಿಷ್ಕರಣೆಯೇ ಆಗಿಲ್ಲ. ಈ ಕುರಿತು ಹರಾಜು ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಕಾಲ ಕಾಲಕ್ಕೆ ಬಾಡಿಗೆ ಪರಿಷ್ಕರಣೆ ಯಾಗದ ಹಿನ್ನೆಲೆ ಪಾಲಿಕೆಗೆ ಕೋಟ್ಯಂ ತರ ಹಣ ನಷ್ಟವಾಗುತ್ತಿದೆ. ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಮಳಿಗೆಗಳ ಬಾಡಿಗೆ ದರವನ್ನು ಪ್ರತಿವರ್ಷ ಪರಿಷ್ಕರಣೆ ಮಾಡಬೇಕು ಎಂಬುದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಯಲ್ಲಿನ ಪಾರದರ್ಶಕ ಕಾಯಿದೆ ಸ್ಪಷ್ಟವಾಗಿ ಹೇಳಿದೆ. ಆದರೆ, 2003ರಲ್ಲಿ ಬಾಡಿಗೆ ಪರಿಷ್ಕರಣೆ ಆಗಿರುವುದು ಬಿಟ್ಟರೆ, ಇಲ್ಲಿಯ ಮಳಿಗೆಗಳ ಬಾಡಿಗೆ ದರ ಒಂದೂವರೆ ದಶಕದಿಂದ ಪರಿಷ್ಕರಣೆಯೇ ಆಗಿಲ್ಲ.
ಉಪಗುತ್ತಿಗೆಯಲ್ಲಿ ಹಣ ವಸೂಲಿ: ಮೂಲ ಬಾಡಿಗೆದಾರರೇ ಇಲ್ಲದ ಮಳಿಗೆಗಳು 4-5 ಜನರಿಂದ ಕೈ ಬದಲಾಗಿ, ಉಪಗುತ್ತಿಗೆಗೆ ಮಳಿಗೆ ನೀಡುವ ಮೂಲಕ ಪಾಲಿಕೆ ನಿಗದಿ ಪಡಿಸಿರುವ ಬಾಡಿಗೆ ದರಕ್ಕಿಂತ ಐದಾರು ಪಟ್ಟು ಹೆಚ್ಚು ಬಾಡಿಗೆ ವಸೂಲಿ ಮಾಡುವ ದಂಧೆ ನಡೆಯುತ್ತಿದೆ. ಇದರಲ್ಲಿ ಮಾಜಿ ಮೇಯರ್, ಮಾಜಿ ಕಾರ್ಪೋರೇಟರ್ ಹಾಗೂ ರಾಜಕಾರಣಿಗಳಿಗೆ ಸೇರಿದ ಮಳಿಗೆಗಳೂ ಇವೆ. ಇವರೆಲ್ಲಾ ಉಪಗುತ್ತಿಗೆಗೆ ನೀಡಿ ಪ್ರತಿ ತಿಂಗಳು ಆರಾಮವಾಗಿ ಕುಂತಲ್ಲಿ ಹಣ ಎಣಿಸುತ್ತಿದ್ದಾರೆ. ಈ ಸಂಗತಿ ಪಾಲಿಕೆ ಅಧಿಕಾರಿಗಳಿಗೆ ತಿಳಿದಿರುವ ವಿಷಯ ವಾದರೂ, ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಪಾಲಿಕೆ ಇಂದಿಗೂ ಅದು ಮೂಲ ಬಾಡಿಗೆದಾರರ ಹೆಸರಿನಲ್ಲಿ ರಶೀದಿ ನೀಡುತ್ತಿದ್ದು, ಅವರ ಹೆಸರಿ ನಲ್ಲಿಯೇ ಬಾಡಿಗೆ ಸಂಗ್ರಹಿಸಲಾಗುತ್ತಿರುವುದು ವಿಶೇಷ.
ಮಾರುಕಟ್ಟೆಯಲ್ಲಿ ಈಗಿರುವ ಮಳಿಗೆದಾರರಿಂದ ಪಾಲಿಕೆಗೆ ಲಾಭವಿಲ್ಲದೇ ಇದ್ದರೂ, ಮಾರುಕಟ್ಟೆ ನಿರ್ವಹಣೆಗೆ ಮಾತ್ರ ಹಣ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಗೊಳಿಸಿ, ನೂತನ ಕಟ್ಟಡ ನಿರ್ಮಾಣ ಮಾಡಿ ಹೊಸದಾಗಿ ಮಳಿಗೆಗಳನ್ನು ಹಂಚುವ ಚಿಂತನೆಯಲ್ಲಿದೆ ಎಂಬುದು ಪಾಲಿಕೆ ಸದಸ್ಯರೊಬ್ಬರ ಅಭಿಪ್ರಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ